ಭಾನುವಾರ, ಮೇ 23, 2010

ಮಂಜಿನ ಮಳೆ ಸುರಿಯುತ್ತಿದೆ, ಏರ್ ಫ್ಲಾರಿಡಾ 90 ವಿಮಾನ ರನ್ ವೇ ಮೇಲೆ ಸಾಗುತ್ತಿದೆ. ಅದರ ರೆಕ್ಕೆಗಳ ಮೇಲೆ ಭಾರಿ ಪ್ರಮಾಣದ ಮಂಜು ಬಿದ್ದಿದೆ. ಯಾವ ಎಚ್ಚರಿಕೆಯನ್ನೂ ಲೆಕ್ಕಿಸದ ಪೈಲಟ್ ಟೇಕಾಫ್ ಗೆ ಮುಂದಾಗುತ್ತಾನೆ. ಮಂಜಿನ ಭಾರಿ ಮಳೆಯ ನಡುವೆ ವಿಮಾನ ನೆಲ ಬಿಟ್ಟು ಮೇಲಕ್ಕೇಳುತ್ತದೆ.


ಟೇಕಾಫ್ ಗೆ ಸ್ವಲ್ಪವೇ ಮುಂಚಿನ ಸಮಯದಲ್ಲಿ ಕೋ ಪೈಲಟ್ ಗೆ ಸಂಶಯ ಮೂಡತ್ತದೆ. ಅವನು ಪೈಲಟ್ ಗೆ ಎಚ್ಚರಿಸುತ್ತಾನೆ.

ಕೋ ಪೈಲಟ್: ಏನೋ ತೊಂದರೆ ಕಾಣಿಸ್ತಿದೆ.

ಪೈಲಟ್: ಕಾಕ್ ಪಿಟ್ ರೀಡಿಂಗ್ಸ್ ಸರಿಯಾಗೇ ತೋರಿಸ್ತಿದೆ.

ಕೋ ಪೈಲಟ್: ಆ ರೀಡಿಂಗ್ ಫಾಲ್ಸ್ ಸೆಕ್ಯುರಿಟಿ ಫೀಲಿಂಗ್ ತರಿಸ್ತಿರಬಹುದೇನೋ.

ಪೈಲಟ್ ಮತ್ತಷ್ಟು ಗುಂಡಿಗಳನ್ನು ಒತ್ತುತ್ತಾನೆ. ರೆಕ್ಕೆಯ ಮೇಲಿನ ಮಂಜು ತೆರವಿಗೆ ಯತ್ನಿಸುತ್ತಾನೆ. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿರುತ್ತದೆ. ವಿಂಗ್ ಅ್ಯಂಟಿ ಐಸ್ ಸಿಸ್ಟಂ ಆಫ್ ಆಗಿದ್ದನ್ನು ಮತ್ತೆ ಕೋ ಪೈಲಟ್ ಎಚ್ಚರಿಸುತ್ತಾನೆ.

ಕೋ ಪೈಲಟ್: ಓ ಗಾಡ್! ಏನೋ ತೊಂದರೆ ಇದೆ. ನೋಡಿಲ್ಲಿ ಇದ್ಯಾಕೊ ಸರಿ ಕಾಣಿಸ್ತಿಲ್ಲ. ಎಲ್ಲ ಸರಿಯಾಗಿದೆಯಾ? ಇಲ್ಲ ಇದೇನೋ ಸರಿ ಇಲ್ಲ...
ಪೈಲಟ್: ಹೌದು ಸರಿ ಇದೆ. ನೋಡಿಲ್ಲಿ ಎಕ್ಸಿಲರೇಷನ್ 80 ನಾಟ್ಸ್ ರೀಡಿಂಗ್ ತೋರಿಸ್ತಿದೆ.

ಕೋ ಪೈಲಟ್: ಇಲ್ಲ ಖಂಡಿತ ಇದೇನೋ ಸರಿ ಇಲ್ಲ...

(ಬ್ಲ್ಯಾಕ್ ಬಾಕ್ಸ್ ಪ್ರಕಾರ ಕಾಕ್ಪಿಟ್ ರೀಡಿಂಗ್ ಹೈ ಆಗೇ ತೋರಿಸ್ತಿತ್ತು. ಎಂಜಿನ್ ಬೇಕಾದ ಪಾವರ್ ಕೊಡ್ತಿರಲೇ ಇಲ್ಲ. ಅದು ತಪ್ಪು ರೀಡಿಂಗ್ಸ್ ತೋರಿಸ್ತಿತ್ತು... ಕ್ಯಾಪ್ಟನ್ ಗೆ ಅನಿಸ್ತಿತ್ತು ಎಂಜಿನ್ ನಿಂದ ಅಗತ್ಯ ಪಾವರ್ ಲಭ್ಯವಾಗ್ತಿದೆ. ಟೇಕಾಫ್ ಮುಂದುವರಿಸಬಹುದು ಎಂದು...)
ಕ್ಯಾಪ್ಟನ್: ಕಮಾನ್ ಫಾರ್ವರ್ಡ್, ಫಾರ್ವರ್ಡ್... ಓಹ್ ಮೇಲಕ್ಕೇರುತ್ತಲೇ ಇಲ್ಲ... ಎಂಜಿನ್ ಸ್ಥಗಿತಗೊಳ್ಳುತ್ತಿದೆ.. ನಾವು ಕೆಳಕ್ಕೆ ಬೀಳುತ್ತಿದ್ದೇವೆ...

ಕೋ ಪೈಲಟ್: ನಾವು ಕೆಳಕ್ಕೆ ಹೋಗುತ್ತಿದ್ದೇವೆ..

ಪೈಲಟ್: ನಂಗೊತ್ತು...

ವಿಮಾನ ಕ್ಷಣಾರ್ಧದಲ್ಲೇ ಒಂದು ಸೇತುವೆಗೆ ಅಪ್ಪಳಿಸಿ ಮಂಜು ತುಂಬಿದ ನೀರಲ್ಲಿ ಬೀಳುತ್ತದೆ..

ಎಂಜಿನ್ ಗೆ ಮಂಜು ಹೊಕ್ಕು ಅಲ್ಲಿ ಗಾಳಿಯ ಚಲನೆಗೆ ಅಡ್ಡಿ ಮಾಡಿತ್ತು. ಅಲ್ಲಿನ ಸೆನ್ಸರಿಗೆ ಗರಬಡಿದಿತ್ತು. ಎಂಜಿನ್ ರೀಡಿಂಗ್ ಮೋಸ ಮಾಡಿತ್ತು. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿತ್ತು.. ಟೇಕಾಫ್ ಮಾಡಲೇಬಾರದಾಗಿತ್ತು. ಆದರೂ ಕಡೆ ಘಳಿಗೆಯಲ್ಲಿ ಪೈಲಟ್ ಟೇಕಾಫ್ ಮಾಡಿಬಿಟ್ಟ. ಕೇವಲ 24 ಸೆಕೆಂಡುಗಳಲ್ಲಿ ಎಂಜಿನ್ ಫೇಲ್ ಆಯ್ತು. ಆ ನಂತರದ ಎಂಟು ಸೆಕೆಂಡುಗಳ್ಲಿ ವಿಮಾನ ಸೇತುವೆಯೊಂದಕ್ಕೆ ಅಪ್ಪಳಿಸಿತು. ಸೇತುವೆಯ ಮೇಲೆ ಕಾರಿನಲ್ಲಿ ಪಯಣಿಸುತ್ತಿದ್ದವರು ಸೇರಿದಂತೆ ಎಷ್ಟೊ ಜನ ಸತ್ತೇ ಹೋದರು. ಕೆಲವರು ಪವಾಡಸದೃಶ ಪಾರಾದರು. ಘಟನೆ ಸಂಭವಿಸಿದ ಕೆಲವೇ ಸಮಯದಲ್ಲಿ ರಕ್ಷಣಾ ಹೆಲಿಕಾಪ್ಟರ್ ಸ್ಥಳಕ್ಕೆ ಧಾವಿಸಿತು. ಮಂಜಿನಿಂದಾವೃತವಾದ ನೀರಿನಲ್ಲಿ ಕೆಲವರಿಗೆ ಕೈಕಾಲೇ ಆಡುತ್ತಿಲ್ಲ. ಒಬ್ಬ ಹೆಣ್ಣುಮಗಳಂತೂ ನಿತ್ರಾಣಳಾಗಿ ಮಂಜುಗಡ್ಡೆಗಳ ನಡುವೆ ಸಿಕ್ಹಾಕಿಕೊಂಡು ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದಳು. ಅವಳನ್ನು ರಕ್ಷಣಾ ಸಿಬ್ಬಂದಿ ಅನಾಮತ್ತಾಗಿ ಎತ್ತಿಕೊಂಡಿತು. ಅವಳ ಜೀವ ಉಳಿಸಿತು.
ಇದಷ್ಟನ್ನು ಯುಟ್ಯುಬ್ ವಿಡಿಯೊ ಸವಿವರ ನೀಡಿದ್ದು. ವಿಮಾನ ಟೇಕಾಫ್ ಆಗುವ ಯಥಾವತ್ ಚಿತ್ರಣ... ಕಾಕ್ ಪಿಟ್ ನಲ್ಲಿ ಪೈಲಟ್, ಕೋ ಪೈಲಟ್ ಮಾತನಾಡುವುದು, ವಿಮಾನ ಚಾಲನೆಗೆ ಏನೆಲ್ಲ ಸಿಸ್ಟಂ ಇದೆ, ರೀಡಿಂಗ್ ಹೇಗೆ ತೋರಿಸತ್ತದೆ, ಯಾವ ನಾಬ್ ಒತ್ತಿದರೆ ಯಾವುದು ಕೆಲಸ ಶುರುವಾಗುತ್ತೆ, ಮತ್ತು ಎಂಜಿನ್ ಫೇಲ್ ಆದಾಗ ಏನೆಲ್ಲ ಕಾಕ್ ಪಿಟ್ ನಲ್ಲಿ ನಡೆಯುತ್ತೆ ಎಂದೆಲ್ಲ ವಿವರಿಸಿತು ವಿಡಿಯೊ...
ಬ್ಲ್ಯಾಕ್ ಬಾಕ್ಸ್ ನಲ್ಲಿ ರೆಕಾರ್ಡ್ ಆದ ಪೈಲಟ್, ಕೊ ಪೈಲಟ್ ಸಂಭಾಷಣೆ, ಅಪಘಾತ ನಡೆದಿದ್ದಕ್ಕೆ ಎಲ್ಲ ಸಾಕ್ಷ್ಯಗಳನ್ನು ಅದು ಹೇಗೆ ಬಚ್ಚಿಟ್ಟುಕೊಳ್ಳುತ್ತೆ, ಅದರ ಆಧಾರದಲ್ಲಿ ಮತ್ತು ಏರೋನಾಟಿಕ್ಸ್ ತಂತ್ರಜ್ಞಾನದ ಆಧಾರದಲ್ಲಿ ಅಪಘಾತಕ್ಕೆ ಸ್ಪಷ್ಟವಾದ ತಾಂತ್ರಿಕ ದೋಷಗಳನ್ನು ತಜ್ಞರು ಏನಲ್ಲ ಜ್ಞಾನ ಬಳಸಿ ಕಂಡುಕೊಳ್ಳುತ್ತಾರೆ? ಎನ್ನುವ ಎಲ್ಲ ಕುತೂಹಲಗಳನ್ನು ಎಳೆ ಎಳೆಯಾಗಿ ವಿಡಿಯೊ ತೋರಿಸಿತು.


ಇದು ಮುದ್ರಣ ಮಾಧ್ಯಮದಲ್ಲಿ ಸಾಧ್ಯವಾ?


ಮುದ್ರಣ ಮಾಧ್ಯಮಕ್ಕೆ ಇಂಥ ಅನುಭವ ಕಟ್ಟಿಕೊಡಲು ಸಾಧ್ಯವಾ? ಈ ವಿಡಿಯೊ ಗಮನಿಸಿ.

http://www.metacafe.com/w/68951/

















ಟ್ರಸ್ಟ್ ಸೆನ್ಸಸ್ ಮಂಜಿನಿಂದ ಬ್ಲಾಕ್ ಆಗದಂತೆ ತಡೆಯಲು ಮೊದಲ ಆದ್ಯತೆ ಕೊಡಬೇಕೆಂದು ಎವಿಯೇಷನ್ ಅಥಾರಿಟಿ ತಾಕೀತು ಮಾಡಿತು.

ಬುಧವಾರ, ಮೇ 19, 2010

"ಮಲೆಗಳಲ್ಲಿ ಮದುಮಗಳು"

ಮೈಸೂರು ರಂಗಾಯಣದಂಗಳದಲ್ಲಿ ಮಲೆನಾಡು ಸೃಷ್ಟಿಯಾಗಿ, ಅದರೊಳಗೆ "ಮಲೆಗಳಲ್ಲಿ ಮದುಮಗಳು" ಕನ್ನಡದ ಮಹಾಕಾದಂಬರಿ ಅಕ್ಷರಶಃ ಜೀವಪಡಕೊಂಡು ಒಂದಿಡೀ ರಾತ್ರಿ ಬದುಕಿತು! (ಹೀಗೆ ಹಲವು ರಾತ್ರಿಗಳನ್ನೂ ಈಗ ಕಾಣುತ್ತಿದೆ)

ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಒಂದು ವಿಶಿಷ್ಠ ಪ್ರಯೋಗವಾಗಿ ದಾಖಲಾಗಿರುವ "ಮಲೆಗಳಲ್ಲಿ ಮದುಮಗಳು" ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರ ಮಹತ್ವಾಕಾಂಕ್ಷೆಯ ರಂಗಸಾಹಸ.

ಮಲೆನಾಡಿನ ಒಂದು ಭಾಗವನ್ನೇ ಕತ್ತರಿಸಿ ತಂದು ರಂಗಾಯಣದ ಆವರಣದಲ್ಲಿಟ್ಟಂತಿದೆ ರಂಗವಿನ್ಯಾಸ. ಇಡೀ ನಾಟಕದ ಜೀವಾಳವೇ ಆ ರಂಗವಿನ್ಯಾಸ (ರಂಗವಿನ್ಯಾಸ: ದ್ವಾರ್ಕಿ) ಎಂದರೆ ತಪ್ಪಲ್ಲ. ಕಥೆಯ ಪ್ರಮುಖ ಮೂಡ್ ಸೃಷ್ಟಿಯಾಗೋದೇ ಮಲೆನಾಡಿನ ಪರಿಸರದಿಂದ. ಅದರಿಂದ ಪಾತ್ರಗಳನ್ನು ಹೊರಕ್ಕಿಟ್ಟರೆ ಕಥೆಯೇ ನೀರಸ. ಹೀಗಾಗಿ ಇಂಥ ಪರಿಸರದ ಮರುಸೃಷ್ಟಿಯ ಸಾಹಸ ಅನಿವಾರ್ಯ. ಒಟ್ಟು ರಂಗವನ್ನು ನಾಲ್ಕು ಸ್ಥಳಗಳಲ್ಲಿ ವಿಂಗಡಿಸಿಕೊಳ್ಳಲಾಗಿತ್ತು. ಕಥೆಯ ಓಘ ಮತ್ತು ಅದು ಬಯಸುವ ಪರಿಸರ, ಮೂಡ್ ಗೆ ತಕ್ಕಂತೆ ರಂಗಸಜ್ಜಿಕೆ ಮಾಡಲಾಗಿತ್ತು. ಕಥೆಯ ಒಂದು ಭಾಗ ಮೊದಲ ರಂಗಸಜ್ಜಿಕೆಯಲ್ಲಿ ಕೊನೆಗೊಂಡರೆ ಮುಂದಿನದು ಮಿಕ್ಕ ರಂಗಸಜ್ಜಿಕೆಗಳಲ್ಲಿ... ಹೀಗೆ ದೃಶ್ಯಗಳು ವಿವಿಧ ರಂಗಸಜ್ಜಿಕೆಗಳಿಗೆ ಬದಲಾದಂತೆ ಪ್ರೇಕ್ಷಕರೂ ಶಿಫ್ಟ್ ಆಗುತ್ತಿದ್ದರು. ಬಸಲಿಂಗಯ್ಯ ಸೂಕ್ತ ಸಾಹಸದ ನಿರ್ಧಾರವನ್ನೇ ಕೈಗೊಂಡಿದ್ದಾರೆ. ಇಂಥ ಪರಿಸರ ಸ್ನೇಹಿ ನಾಟಕಕ್ಕೆ ಈ ವಾತಾವರಣವೇ ಬೇಕು ಕೂಡ. ಇದೊಂದು ವಿಶಿಷ್ಠ ರಂಗಾನುಭವ. ಈ ಪ್ರಯೋಗ ಇಂಟೀಮೇಟ್ ಪ್ರೊಸಿನಿಯಂ ಥಿಯೇಟರ್ ಅಥವಾ ಎನ್ವಿರಾನ್ಮೆಂಟ್ ಥಿಯೇಟರ್ ಗಿಂತ ಕೊಂಚ ಭಿನ್ನವಾಗಿದೆ. ಈ ಸಾಹಸ ನೋಡಿದಾಗ ನನಗೆ ಮತ್ತೋರ್ವ ಹೆಸರಾಂತ ರಂಗಕರ್ಮಿ ಅಮೀರ್ ರಜಾ ಹುಸೇನ್ ನೆನಪಾದರು. ದಿ ಲೆಜೆಂಡ್ ಆಫ್ ರಾಮಾ, ಕಾರ್ಗಿಲ್ ಕುರಿತ ಫಿಫ್ಟಿ ಡೇಸ್ ಮತ್ತಿತರ ಪ್ರಯೋಗಗಳನ್ನು ಇಂಥ ವಿನ್ಯಾಸದಲ್ಲಿ ನಿರೂಪಿಸುವುದರಲ್ಲಿ ಅವರು ಸಿದ್ಧಹಸ್ತರು. ಕಾರ್ಗಿಲ್ ಕುರಿತ ನಾಟಕಕ್ಕೆ ಅವರು ಆರು ಎಕರೆ ಪ್ರದೇಶವನ್ನೇ ಬಳಸಿಕೊಂಡಿದ್ದರು. ಅಲ್ಲಿ ಹೆಲಿಕಾಪ್ಟರ್, ಯುದ್ಧದ ಸನ್ನಿವೇಶಗಳನ್ನೆಲ್ಲ ಯಥಾವತ್ ಆಗಿ ಸೃಷ್ಟಿಸಿದ್ದರು. ಅಲ್ಲೂ ಪ್ರೇಕ್ಷ್ಕರು ದೃಶ್ಯದಿಂದ ದೃಶ್ಯಕ್ಕೆ ಶಿಫ್ಟ್ ಆಗುತ್ತಿದ್ದರು.
ಕನ್ನಡದ ಸಂದರ್ಭದಲ್ಲಿ ಕ್ರೈಸ್ತನ ಬಗ್ಗೆ ಇಕ್ಬಾಲ್ ಅಹಮದ್, ವಾಲ್ಟರ್ ಡಿಸೋಜ 'ಸ್ಪಾರ್ಟಕಸ್' ನಾಟಕ (ಧಾರವಾಡದ ಸಾಹಿತ್ಯ ಭವನ ಕಟ್ಟಡವನ್ನೇ ಬಳಸಿಕೊಂಡು ಮಾಡಿದ ಪ್ರಯೋಗ. ರಂಗವಿನ್ಯಾಸ ನಾನು ಮಾಡಿದ್ದೆ) ಪ್ರಯೋಗಗಳಲ್ಲಿ ತಕ್ಕಮಟ್ಟಿನ ಇಂಥ ತಂತ್ರ ಬಳಸಿದ್ದರ ನೆನಪಾಗುತ್ತಿದೆ.

ರಂಗಾಯಣದ ಮಾಗಿದ ಕಲಾವಿದರು ಮತ್ತು ಈ ಪ್ರಯೋಗಕ್ಕೆಂದೇ ತರಬೇತುಗೊಂಡ ಹೊಸಬರು ಒಂದಿಡೀ ರಾತ್ರಿ ಸತತ ಒಂಭತ್ತು ಗಂಟೆಗಳ ಕಾಲ ನಾಲ್ಕು ರಂಗ ಸಜ್ಜಿಕೆಗಳ ಮೇಲೆ ಇಡೀ ಕಾದಂಬರಿಯನ್ನೇ ಬದುಕಿದರು. ಮಲೆನಾಡಿನ ಪರಿಸರ, ಅಲ್ಲಿನ ಜನಸಂಸ್ಕೃತಿಯನ್ನು ಕಣ್ಮುಂದೆ ಕಟ್ಟಿಕೊಟ್ಟರು. ಡಾ. ಕೆ.ವೈ. ನಾರಾಯಣ ಸ್ವಾಮಿ ಕಾದಂಬರಿಯನ್ನು ರಂಗಕ್ಕಿಳಿಸಿದ ಪರಿ, ಆ ಅದ್ಭುತ ರಂಗವಿನ್ಯಾಸ, ಬೆಳಕು, ರಂಗಪರಿಕರ, ಗುತ್ತಿ, ಹುಲಿಯ (ಗುತ್ತಿನಾಯಿ) ಪಾತ್ರ, ಹೆಗ್ಗಡತಿಯರು, ಪೀಂಚಲು, ಐತಿ, ಸುಬ್ಬಣ್ಣ ಹೆಗ್ಗಡೆ, ತಿಮ್ಮಪ್ಪ ಹೆಗ್ಗಡೆ, ನಾಗಕ್ಕ, ವೆಂಕಟಣ್ಣ, ಪಾದ್ರಿ, ದೇವಯ್ಯ ಪಾತ್ರಗಳ ಲೀಲಾಜಾಲದ ಅಭಿನಯ ಒಂದು ವಿಶಿಷ್ಠ ರಂಗಾನುಭವ ನೀಡಿತು. ಇವರೆಲ್ಲರ ಶ್ರಮಕ್ಕೆ ಹ್ಯಾಟ್ಸಾಫ್!

ಯಾವುದೇ ಕೃತಿಯ ಸಬ್ ಟೆಕ್ಸ್ಟ್ ಮೇಲೇ ಕಣ್ಣಿಡುವ ಬಸವಲಿಂಗಯ್ಯ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಮೂಲ ಆಶಯಗಳನ್ನು ಕಡೆಗಣಿಸಿಲ್ಲ. ಆದರೆ, ಇಡೀ ಕಥಾಹಂದರದ ಒಳದನಿಯಲ್ಲಿ ಗುತ್ತಿ ಪಾತ್ರಕ್ಕಿರುವ ಸ್ಕೋಪ್ ಬಸುಗೆ ಸೆಳೆದಂತಿದೆ. ಅದಕ್ಕೆ ಪುಶ್ ಅಪ್ ನೀಡಿ, ಆತನ ಮತ್ತಷ್ಟು ಹೀರೋ ಮಾಡುವ ಸಾಹಸಕ್ಕೆ ಇಲ್ಲಿ ಅವಕಾಶ ಇದ್ದುದನ್ನು ಅವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಆ ಮೂಲಕ ಇಡೀ ಕಾದಂಬರಿಯನ್ನು ಮತ್ತೆ ಬರೆದಿದ್ದಾರೆ ಬಸವಲಿಂಗಯ್ಯ.

ಕೆಲವು ಪಾತ್ರಗಳ ಮೇಲಿನ ಅವರ ಸಾಮಾಜಿಕ ಕಾಳಜಿಗಿಂತ ರಾಜಕೀಯ ಕಾಳಜಿ ಹೆಚ್ಚು ಕೆಲಸ ಮಾಡಿದೆ. ಗುತ್ತಿ ಬಗ್ಗೆ ಅವರದು ಹೀರೋಯಿಸಂ ಅಪ್ರೋಚ್. ಹೆಣ್ಣು ಪಾತ್ರಗಳಿಗೆ ಅವರದು ಫೆಮಿನಿಸ್ಟ್ ಧೋರಣೆ. ಕಾದಂಬರಿಯ ಕಥೆ ಕೂಡ ಫೆಮಿನಿಸಂ ಗೆ ಹೆಚ್ಚು ಒತ್ತು ಕೊಟ್ಟಿದೆ. ಈ ಕಾಲದಲ್ಲಂತೂ ಫೆಮಿನಿಸಂ ಅನ್ನೋದು ಒಂದು ಜನಪ್ರಿಯ ಧೋರಣೆಯಾಗಿಬಿಟ್ಟಿದೆ... ಮಾರುಕಟ್ಟೆ ಸಂಸ್ಕೃತಿಯ ಲಾಭಕ್ಕೆ ಹುಟ್ಟಿಕೊಂಡ ಫೆಮಿನಿಸಂ ಮತ್ತು ಮಲೆಗಳಲ್ಲಿ ಮದುಮಗಳ ಫೆಮಿನಿಸಂ ಎರಡೂ ಬೇರೆ ನೆಲೆಯಲ್ಲಿದ್ದರೂ ಕಾಲದ ಹೊಡೆತಕ್ಕೆ ಮಲೆಗಳಲ್ಲಿ ಮದುಮಗಳೂ ಕೂಡ ಮಾರುಕಟ್ಟೆಗೇ ಬಂದು ನಿಲ್ಲುತ್ತಾಳೆ. ಇದು ಈಗ ನಾಟಕವಾಗಿ ಪ್ರದರ್ಶನಗಳ ಮೇಲೆ ಪ್ರದರ್ಶನ ಕಾಣುತ್ತಿರುವುದು ಕೂಡ ಮಾರುಕಟ್ಟೆ (ಸ್ವಪ್ರತಿಷ್ಠೆ, ಸ್ವಾರ್ಥ, ಪ್ರಚಾರ) ಸಂಸ್ಕೃತಿಯ ನೆಲೆಯಲ್ಲೇ.

ಇಡೀ ನಾಟಕದಲ್ಲಿ ಹೆಗ್ಗಡೆಯರ ದರ್ಪ, ಅವರ ಹೆಂಗಸರ ಹಾದರ, ಅವರೊಳಗೆ ಆಗಾಗ ತಮ್ಮ ಹಿತಾಸಕ್ತಿಗಾಗೇ ಮಿಸುಕಾಡುವ ಮನುಷ್ಯತ್ವ, ದಲಿತರ ಸ್ಥಿತಿ, ನಾಯಿ, ಅಲ್ಲಿನ ಪಶುಪಕ್ಷಿಗಳು, ಕಾಡು, ಹೆಂಡ ....ಹೀಗೆಲ್ಲ ಎಲ್ಲದಕ್ಕೂ ಕಥೆ ಮತ್ತು ನಿರ್ದೇಶಕರ ದೃಷ್ಟಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮದ ಮೇಲಿದೆ. ರಾಜಕೀಯ ಆಯಾಮಕ್ಕೆ ಕಥೆಯ ಆಶಯ ಅಥವಾ ನಿರ್ದೇಶಕ ಕೈಹಾಕೋದಿಲ್ಲ. ಅದು ಡೇಂಜರ್ ಎನ್ನುವ ಎಚ್ಚರಿಕೆ ಇಲ್ಲಿ ಕೆಲಸ ಮಾಡಿದೆ. ರಾಜಕೀಯ ಆಯಾಮದಲ್ಲೂ ನಾಟಕ ಕಂಡಿದ್ದರೆ ಗುತ್ತಿ ಇಲ್ಲಿ ಕ್ರಾಂತಿಕಾರಿ ಹೀರೋ ಆಗುತ್ತಿದ್ದ. ಆದರೆ, ಸಂಘರ್ಷ ಬೇಕಾಗೇ ಇಲ್ಲ ಇಲ್ಲಿ! ಗುತ್ತಿ ಕೇವಲ ಆತ್ಮಾನುಕಂಪ ಗಳಿಸೋದಕ್ಕೆ ಯತ್ನಿಸುತ್ತಾನೆ. ಅವನ ಮ್ಯಾನರಿಸಂ, ಸುಳ್ಳು, ತಂತ್ರ, ದೈನ್ಯತೆ ಎಲ್ಲವೂ ಮೇಲ್ವರ್ಗದವರ ಅನುಕಂಪ ಸಂಪಾದನೆಗೆ ಸೀಮಿತಗೊಂಡಿದೆ. ಮೀಸಲಾತಿ ಕೂಡ ಇದೇ ಮನಸ್ಥಿತಿಯದು. ಮೀಸಲಾತಿ ಅನ್ನೋದು ಮೇಲ್ವರ್ಗದವರ ಹುನಾರೇ. ಕ್ರಾಂತಿಯ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕೆನ್ನುವ ಅಂಬೇಡ್ಕರ್ ಹಂಬಲದ್ದಲ್ಲ ಇದು. ಅವರು ಕಂಡ ಕನಸಿನಂತೆ ಕ್ರಾಂತಿ ಏನಾದರೂ ನಡೆದಿದ್ದರೆ ದಲಿತರು ಇನ್ನೂ ಮೀಸಲಾತಿ ನಂಬಿಕೊಂಡೇ ಬದುಕಬೇಕಾಗುತ್ತಿರಲಿಲ್ಲ. ಅವರದೇ ರಾಜ್ಯ ಸ್ಥಾಪನೆಯಾಗುತ್ತಿತ್ತೋ ಏನೋ? ಪ್ರಸಕ್ತ ಸ್ಥಿತಿಯಲ್ಲಿ ಮಾಯಾವತಿ ಮಾತ್ರ ದಲಿತ ನಾಯಕತ್ವಕ್ಕೆ ಯತ್ನಿಸುತ್ತಿರುವುದ ಬಿಟ್ಟರೆ ಉಳಿದ ದಲಿತ ನಾಯಕರೆಲ್ಲ ಆಯಾಯ ಪಕ್ಷಗಳ ಮೀಸಲಾತಿ ಎನ್ನುವ ಕಂಫರ್ಟ್ ಝೋನ್ ಗಳಲ್ಲಿ ಬಂಧಿಯಾಗಿದ್ದಾರಲ್ಲ... ಅವರದೂ ಗುತ್ತಿಯ ಪಾಡು. ಇಡೀ ಜನಾಂಗ ಗುತ್ತಿನಾಯಿಯ ಪಾಡಿನಂಥದು. ನಾಟಕದಲ್ಲಿ ಗುತ್ತಿ ಉಳಿಸಲು ಹೇಗೆ ನಾಯಿ ಪ್ರವಾಹದ ಸೆಳವಿಗೆ ಎದೆಕೊಟ್ಟು ನೀರುಪಾಲಾಗುವುದೋ, ಹಾಗೆ ದಲಿತರೆಲ್ಲ ತಮ್ಮ ನಾಯಕರ ಕುರ್ಚಿ-ಮಾನ ಉಳಿಸಲು ಈಗಲೂ ಶೋಷಣೆಯ ಸೆಳವಲ್ಲೇ ಈಜುತ್ತಿದ್ದಾರೆ.

ದೇವಯ್ಯ ಮತ್ತಿತರ ಗೌಡರ ಭಾನಗಡಿಗಳೆಲ್ಲ ಇಲ್ಲಿ ಹಾಸ್ಯದ ಲೇಪದಲ್ಲಿ ತೇಲಿ ರೋಮ್ಯಾಂಟಿಕ್ ಆಗಿ ಕಾಣಿಸುತ್ತವೆ. ಅದೆಲ್ಲ ಅವರ ರಸಿಕತೆ ಅಷ್ಟೆ ಎನ್ನುವ ಹಾಗಿದೆ ಚಿತ್ರಣ. ಗೌಡತಿಯರು ಅಥವಾ ಹೆಗ್ಗಡತಿಯರ ಹಾದರಗಳು, ಅವರಿವರ ಜತೆ ಹಾಸಿಗೆ ಬದಲಾಯಿಸುವ ಲಂಪಟ ಹೆಣ್ಣುಗಳು, ಸ್ವತಃ ಸೊಸೆಯನ್ನೇ ಹಾದರದ ಪ್ಪಲಂಗಕ್ಕೇರಿಸುವ ಅತ್ತೆಯಂದಿರು... ಇದೆಲ್ಲ ರಸಿಕತೆ ಮತ್ತು ಲೈಂಗಿಕ ಬಯಕೆಗಳಷ್ಟೇ ಎಂದು ತೋರಿಸುವುದು ನಾಟಕದ ಒಳಗಿನ ಹುನಾರು. ಇದನ್ನೇ ಬೇರೊಂದು ಕೆಳಜಾತಿ ಮಾಡಿದ್ದರೆ? ಅದು ಹಾದರ! ಕಥೆಯ ಈ ಮನೋಧರ್ಮವೂ ಒಂದು ಹಿಂಸೆ.

ಕ್ರೈಸ್ತ ಪಾದ್ರಿ ಪಾತ್ರವನ್ನು ತುಂಬ ತಮಾಷೆಯಾಗಿ ಕಟ್ಟಿಕೊಟ್ಟಿದ್ದಾರೆ. ಸೈಕಲ್ ಎನ್ನುವುದು ಇಲ್ಲಿ ಆಧುನಿಕ ಮನೋಧರ್ಮದ ಸಂಕೇತ. ಆಗಿನ ಮಲೆನಾಡಿಗರ ಮನಸ್ಥಿತಿ ಆಧುನಿಕ ವಿರೋಧಿಯಾಗಿತ್ತು ಎನ್ನುವುದಕ್ಕೆ ಅದನ್ನು ಲೇವಡಿ ಮಾಡುವ ದೃಶ್ಯವೇ ಸಾಕ್ಷಿ. ಅದು ಒಟ್ಟು ಮತವೊಂದರ ಲೇವಡಿಯ ಒಂದಂಶದ ವಿಸ್ತಾರ ಪಡಕೊಳ್ಳುವುದು ಇದರೊಳಗಿನ ದೊಡ್ಡ ಹಿಂಸೆ.

ಮತಾಂತರದ ಬಗ್ಗೆ ನಾಟಕದಲ್ಲಿ ಆಡಿದ ಮಾತುಗಳು ಮತೀಯವಾದದ ಸಂಕೇತವಾಗಿಯೂ ಕಾಡುತ್ತವೆ. ಸ್ವತಃ ಕುವೆಂಪು ಮತಾಂತರದ ವಿರೋಧಿಯಾಗಿದ್ದರು. ಅದಕ್ಕೆ ಅವರಿಗೆ ಹಿಂದು ಧರ್ಮದ ಮೇಲಿನ ಪ್ರೀತಿಯೇ ಕಾರಣವಿರಬಹುದು. ಅಥವಾ ರಾಮಕೃಷ್ಣ ಪರಮಹಂಸ, ವಿವೇಕಾನಂದರಿಂದ ಪಡೆದ ಸ್ಫೂರ್ತಿಯೂ ಕಾರಣವಿರಬಹುದು. ಹಿಂದೂ ಧರ್ಮದಲ್ಲಿ ಬ್ರಾಹ್ಮಣರ ಮೇಲಾಟ ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಅವರನ್ನು ಕಾಡಿಲ್ಲ ಎನ್ನುವುದು ಆಶ್ಚರ್ಯ!

ಹೆಗ್ಗಡೆಯರು ದಲಿತರ ಮೇಲೆ ಮಾಡುವ ದೌರ್ಜನ್ಯವಾಗಲಿ, ಅವರ ಬೆವರಿನ ಮೇಲೆ ತಮ್ಮ ಗೌಡಿಕೆಯ ದೌಲತ್ತಿನರಮನೆ ಕಟ್ಟುವುದಾಗಲಿ ಸಹಜ. ದಲಿತರ ಜತೆಗಿನ ಒಡನಾಟಕ್ಕೆ ಒಂದು ಮಟ್ಟಿನ ಮನುಷ್ಯತ್ವದ ಅಂತಃಕರಣವನ್ನು ಹೆಗ್ಗಡೆಯವರಿಗೆ ಅಂಟಿಸಿ, ಅದನ್ನೇ ಆಗಿನ ಜನಸಂಸ್ಕೃತಿಯ ಆದರ್ಶ ಎಂದು ನಾಟಕ ಹೇಳಹೊರಟಿದೆ. ದೌರ್ಜನ್ಯ, ದಲಿತರ ಶೋಷಣೆಯನ್ನು ಅದು ನೆಪಮಾತ್ರಕ್ಕೆ ಪ್ರಶ್ನಿಸುತ್ತದೆ. ಆದರೆ, ಪ್ರಶ್ನಿಸುವ ಧೋರಣೆ ರಾಜಕೀಯ. ಸಾಮಾಜಿಕ, ಸಾಂಸ್ಕೃತಿಕ ಬದ್ಧತೆಯಿಂದ ಕೂಡಿದ್ದಲ್ಲ ಎನಿಸಿತು.

ದಲಿತರೆಲ್ಲ ಅಥವಾ ಶೋಷಣೆಗೊಳಗಾದವರೆಲ್ಲ ಕ್ರೈಸ್ತ ಧರ್ಮಕ್ಕೆ ಅಥವಾ ಇನ್ನಾವುದೋ ಸಾಮಾಜಿಕ ಘನತೆ ತಂದುಕೊಡಬಲ್ಲ ಮತಕ್ಕೆ ಮತಾಂತರಗೊಂಡರೆ ಬ್ರಾಹ್ಮಣರ ಅಟ್ಟಹಾಸಕ್ಕೆ ಹೇಗೆ ಕಡಿವಾಣ ಬೀಳುತ್ತೊ, ಗೌಡರ ಪಾಳೆಗಾರಿಕೆಗೂ ಏಟು ಬೀಳುತ್ತಿತ್ತು. ದಲಿತರೆಲ್ಲ ಕ್ರೈಸ್ತರಾಗಿ ಸಮಾಜದ ಮೇಲಸ್ತರಕ್ಕೆ ಹೋದರೆ, ಗೌಡರ ಹೊಲಗಳಲ್ಲಿ ಜೀತ ಮಾಡೋರು ಯಾರು? ಉಳಿಮೆ ಮಾಡೋರು ಯಾರು? ಇವರು ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರೋರು ಯಾರು?... ಒಟ್ಟಾರೆ ಯಜಮಾನಿಕೆಯ ಗತ್ತು ಹೊರಟು ಹೋಗ್ತದಲ್ಲಾ ಎನ್ನುವ ಕೊರಗು ಹೆಗ್ಗಡೆಯವರದೂ ಆಗಿತ್ತು. ಮತ್ತು ಈ ಯಜಮಾನಿಕೆಗೆ ಯಾವತ್ತೂ ಪುರೋಹಿತಷಾಹಿಯ ಸಾಥ್ ಇದ್ದದ್ದೇ. ನಾಟಕದಲ್ಲಿ ಹೆಗ್ಗಡೆಯ ಹುಡುಗರು ಸಂಸ್ಕೃತ ಪಾಠಶಾಲೆಗೆ ಹೋಗೋದು, ಅಯ್ಯಗಳ ಜತೆ ಪಾಠಕ್ಕಾಗಿಯಾದರೂ ಸೌಹಾರ್ದತೆ ಹೊಂದೋದು ಇದಕ್ಕೆ ಪುಷ್ಠಿ ನೀಡುತ್ತದೆ. ಪುರೋಹಿತಷಾಹಿ ಹಾಗೂ ಮೇಲ್ವರ್ಗ ತನ್ನುಳಿವಿಗಾಗೇ ದಲಿತರನ್ನು ಅನ್ಯ ಸಂಸ್ಕೃತಿಯತ್ತ ಹೊರಡದಂತೆ ನೋಡಿಕೊಳ್ಳೋದು ಹಿಂದೂ ಧರ್ಮದ ಉದ್ಧಾರ!.

ಇದೆಲ್ಲ ನಿರ್ದೇಶಕ ಬಸವಲಿಂಗಯ್ಯ ಅವರಿಗೆ ಕಾಡಿಲ್ಲ. ಗುತ್ತಿಯನ್ನು ಹೀರೋ ಮಾಡಬಹುದಲ್ಲ ಎನ್ನುವ ಸಾಧ್ಯತೆಯೊಂದು ಅವರನ್ನು ಯಾಮಾರಿಸಿಬಿಟ್ಟಿದೆ. ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಒಂದಷ್ಟು ಸವಲತ್ತುಗಳ ಆಮಿಷಗಳಿರೋದರಿಂದ ದಲಿತರೆಲ್ಲ ಅದರತ್ತ ಸರಿದು ನಿಂತಿದ್ದಾರಲ್ಲ ಹಾಗೆ, ಬಸಲಿಂಗಯ್ಯ ಕೂಡ ಕಥೆಯ ಆಶಯಗಳನ್ನು ಒಪ್ಪಿಕೊಂಡಿದ್ದಾರೆ. ಅದರ ಹುನಾರಗಳನ್ನು ಸುಮ್ಮನೇ ಕಡೆಗಣಿಸಿದ್ದಾರೆ. ಹೀಗಾಗಿ ಅವರ ಸಬ್ ಟೆಕ್ಸ್ಟ್ ಇಲ್ಲಿ ಅಷ್ಟು ಕೆಲಸ ಮಾಡಿಲ್ಲ. ಮತಾಂತರ ವಿರೋಧಿ ನೆಲೆಯಲ್ಲಿ ಇದೊಂದು ರಾಜಕೀಯ ಅಜೆಂಡಾವನ್ನಾಗಿ ಮಾಡಲು ಸಾಧ್ಯ! ಈ ಹಿನ್ನೆಲೆಯಲ್ಲೇ ನಾಟಕಕ್ಕೆ ಘನ ಸರ್ಕಾರದ ಪ್ರಾಯೋಜಕತ್ವವೂ ದಕ್ಕಿರಬಹುದು.

ಪಾದ್ರಿ ಪಾತ್ರವನ್ನು ಇವರು ಕಂಡ ರೀತಿಯೇ ಇದಕ್ಕೆ ಸಾಕ್ಷಿ ಒದಗಿಸುತ್ತದೆ. ಒಂದು ವೇಳೆ ಇಂಗ್ಲಿಷ್ ಭಾಷೆಯೇ ಬರದಿದ್ದರೆ ಕುವೆಂಪು ಇಷ್ಟು ದೊಡ್ಡ ಸಾಹಿತಿಯಾಗಲು ಸಾಧ್ಯವಿತ್ತೆ? ದೊಡ್ಡವರಾಗಲು, ವಿದ್ಯಾವಂತರಾಗಲು ಕ್ರೈಸ್ತರು ಸ್ಥಾಪಿಸುವ ಶಾಲೆಗಳು ಹಾಸ್ಟೆಲ್ ಗಳೆಲ್ಲ ಬೇಕು... ರೋಗ ರುಜಿನಗಳೆಲ್ಲ ಆವರಿಸಿದಾಗ ಅವರು ಸ್ಥಾಪಿಸುವ ಆಸ್ಪತ್ರೆಗಳು ಬೇಕು, ನೋವಿನಿಂದ ನರಳುತ್ತ ಬೆಡ್ ಮೇಲೆ ಮಲಗಿದ ರೋಗಿಗಳ ತಿಕ ತೊಳೆದು, ಉಚ್ಚೆ ಹೊಯಿಸಿ ಆರೈಕೆ ಮಾಡಲು ದಾದಿಯರ ಸೇವೆ ಬೇಕು.. ಅಂಥ ಆರಾಮ, ಆರೋಗ್ಯ ವ್ಯವಸ್ಥೆ ಮಾಡಲು ಕ್ರೈಸ್ತ ಧರ್ಮ, ಕ್ರೈಸ್ತರು ಬೇಕು. ಆದರೆ, ಅವರ ಕೆಲ ಧಾರ್ಮಿಕ ಆಶಯಗಳು ಮಾತ್ರ ಇಲ್ಲೇನೂ ಮಾಡಬಾರದು!

ಪಾದ್ರಿಯ ಮಗಳ ಮೇಲೆ, ದಾದಿಯರ ಮೇಲೆ ಕಣ್ಣು ಹಾಕುವ ದೇವಯ್ಯ, ಲುಚ್ಚಾ, ಲೋಫರ್, ಫಟಿಂಗ್ ಏನೂ ಅನ್ನಿಸಿಕೊಳ್ಳುವುದಿಲ್ಲ. ಅದು ಅವನ ರಸಿಕತೆಯ ಸಂಕೇತವಷ್ಟೇ. ಹೀಗಾಗೇ ಈ ಪಾತ್ರ ಇಲ್ಲಿ ಕಾಮಿಡಿ ಪಾತ್ರವಾಗಿದೆ. ಇದೇ ಧೋರಣೆ ಕುಂಟ ವೆಂಕಣ್ಣ ಪಾತ್ರಕ್ಕೂ ಇದೆ. ಆತ ಗಂಡ ಸತ್ತ ಹಾಗೂ ಇನ್ನೂ ವಯಸ್ಸಿರುವ ಹೆಣ್ಣುಗಳ ಮೇಲೆ ಕಣ್ಣು ಹಾಕಬಲ್ಲ. ಅದು ಅವನ ಪುರುಷ ಅಹಮಿಕೆಯೂ ಹೌದು, ರಸಿಕತೆಯೂ ಹೌದು.. ಆದರೆ ಲಂಪಟತನವಲ್ಲ! ಇದೆಂಥ ಮನೋಧರ್ಮ?

ಹೆಗ್ಗಡೆಯವರಿಗೆಲ್ಲ ಹಂದಿ ಹಿಡಿಯಲು ದಲಿತರೇ ಬೇಕು. ಮತ್ತು ಅದರ ಚರ್ಮ ಸೀಳಿ ಮಾಂಸ ತೆಗೆದು ಅವರ ಕೈಗೇ ಇಡಬೇಕು. ದಲಿತರು ತಮಗಲ್ಲೋ ಅದರ ಕರುಳೋ, ಗಾಯಗೊಂಡ ಜಾಗದ ಮಾಂಸವೋ, ಹಂದಿಯ ತೊರಡೋ, ತಲೆಯೋ ಮಾತ್ರವನ್ನೇ ಪಡೆಯಬೇಕಾದ್ದು ಮಲೆನಾಡಿನ ಆ ಭಾಗದ ಸಾಮಾಜಿಕ ನ್ಯಾಯ! ಅಥವಾ ಅದೊಂದು ಸಂರಚನೆ. ಇಡೀ ನಾಟಕದಲ್ಲಿ ಇದೆಲ್ಲ ತಮಾಷೆಯಾಗಿ ಮತ್ತು ಸಾಮಾಜಿಕ ಸ್ಥಿತಿಗತಿಯ ಕಟ್ಟುಪಾಡುಗಳಿಗೆ ಪೂರಕವಾಗೇ ಇದೆ. ಇದೆಲ್ಲ ದುರಾಡಳಿತ ಎನಿಸೋದೇ ಇಲ್ಲ. ಹೆಗ್ಗಡೆಯರ ದಬ್ಬಾಳಿಕೆ ಅನಿಸೋದೇ ಇಲ್ಲ. ಆಗಿನ ಸ್ಥಿತಿಯೇ ಹಾಗಿತ್ತು ಎನ್ನುವುದು ಕೇವಲ ಸಮಜಾಯಿಷಿ.

ಮುಸ್ಲೀಮರ ಸ್ಥಿತಿಯೂ ಇಲ್ಲಿ ಹೊರತಾಗಿಲ್ಲ. ಯಾರದೋ ಕದ್ದ ಮಾಲು, ವಸ್ತುಗಳಿಗೆ ಬದಲಾಗಿ ಹಣ ನೀಡುವ ಕಸುಬನ್ನು ಅದಾವ ಮೂಲೆಯ ಮುಸಲ್ಮಾನರು ಮಾಡುತ್ತಾರೋ?... ಪಾನ್ ಬ್ರೋಕರ್ ಕೆಲಸವಾಗಲಿ, ಬಡ್ಡಿ ವ್ಯಾವಹಾರವಾಗಲಿ ಇಸ್ಲಾಮಿನಲ್ಲಿ ನಿಷಿದ್ಧ. ಹಾಗೆ ಮಾಡೋರನ್ನು ಇಸ್ಲಾಂ ತನ್ನೊಳಕ್ಕಿಟ್ಟುಕೊಳ್ಳಲ್ಲ. ಇದನ್ನು ಇಸ್ಲಾಂ ಶತಮಾನಗಳ ಕಾಲ ಪಾಲಿಸಿಕೊಂಡು ಬಂದಿದೆ. ಇನ್ನು ಇದಾವ ಹೊನ್ನಾಳಿ ಅಥವಾ ಮಲಬಾರಿ ಸಾಬರು ಎನ್ನುವ ಮುಸಲ್ಮಾನ ವೇಷಧಾರಿಗಳೋ! ನಾಟಕದ ತುಂಬ ಇಸ್ಲಾಂ ಅನ್ನು ಹಣಿಯಲು ಮಾಡಿದ ಪುಡಿ ಪಾತ್ರಗಳಿವೆಲ್ಲ. ತಮ್ಮದೇ ಲಾಭಕ್ಕೆ ಏನೋ ಪುಸಲಾಯಿಸಿ ಮುಸ್ಲೀಮರ ಕೈಯಿಂದ ತಪ್ಪು ಕೆಲಸ ಮಾಡಿಸುವ ಹೆಗ್ಗಡೆಯರು ಅದೆಲ್ಲ ಬೇರೇನೋ ಸ್ವರೂಪ ಪಡಕೊಂಡಾಗ ಎಲ್ಲ ತಪ್ಪನ್ನು ಅವರ ಮೇಲೇ ಹಾಕಿಬಿಡೋದು! ಕಚ್ಚಾಟ, ಕೆಸರಾಟ ಶುರುವಾದಾಗ 'ನಿಮಗೆ ಹೊಡೆಯೋದು ಕಡಿಯೋದು ಬಿಟ್ಟರೆ ಬೇರೇನೂ ಗೊತ್ತಿಲ್ಲವೇನ್ರೋ' ಎಂದು ಗದರಿಸುವ ಮತ್ತು ಪೊಲೀಸರ ಮೂಲಕ 'ಇತ್ತೀಚೆಗೆ ಈ ಸಾಬರದು ಹಾರಾಟ ಜಾಸ್ತಿಯಾಗಿದೆ. ಇಕ್ರಲೋ ಈ ಸಾಬರನ್ನ' ಎಂದು ಅಬ್ಬರಿಸುವ, ದಲಿತರು ಮತ್ತು ಸಾಬರ ನಡುವೆ ಜಗಳ ಹಚ್ಚಿ ರಕ್ತಪಾತ ಮಾಡಿಸುವ ದೃಶ್ಯಗಳು ಮುಸ್ಲೀಮರ ವಿರುದ್ಧದ ಹುನಾರುಗಳಲ್ಲದೇ ಏನೂ ಅಲ್ಲ. ಹೊನ್ನಾಳಿಯ ಸಾಬರದು ಲೇವಾದೇವಿ ಕಸುಬೇ ಆಗಿರಬಹುದು. ಇಲ್ಲವೇ ಹೆಗ್ಗಡೆಯರ ಕುಮ್ಮಕಿನಿಂದ ಅವರೆಲ್ಲ ಒಂದಷ್ಟು ದರ್ಪವನ್ನೂ ಮಾಡುತ್ತಿರಬಹುದು. ಆದರೆ, ಅದೆಲ್ಲ ಆ ಪ್ರದೇಶದ ಸಾಮಾಜಿಕ ಹಣೆಬರಹ. ಹೆಗ್ಗಡೆಯರ ಹಾದರ, ದಬ್ಬಾಳಿಕೆ, ಶೋಷಣೆ ಹೇಗೆ ಅಲ್ಲಿನ ಸಾಮಾಜಿಕ ಸ್ಥಿತಿಯ ಒಂದು ಭಾಗವೋ ಹೊನ್ನಾಳಿ ಸಾಬರದೂ...

ಈಗಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಕ್ರೈಸ್ತರು ಮತ್ತು ಮುಸಲ್ಮಾನರು ಹೇಗೆ ಒಂದು ಪಕ್ಷದ ಅಥವಾ ಆ ಧರ್ಮಗಳೇತರರ ಟಾರ್ಗೆಟ್ ಆಗಿದ್ದಾರೋ, ಅದನ್ನೇ ನಾಟಕವೂ ಪ್ರತಿನಿಧಿಸುತ್ತಿರುವುದು ಸ್ಪಷ್ಟವಾಗಿದೆ. ರಂಗಾಯಣ ಸರ್ಕಾರದ ಹಣ ಪಡೆದುಕೊಂಡೇ ತನ್ನ ರಂಗಸಂಸ್ಕೃತಿ ಕಟ್ಟಿಕೊಳ್ಳಬೇಕಾದ್ದರಿಂದ ಪಡೆದ ಹಣಕ್ಕೆ ಹೀಗೆ ಋಣಭಾರ ತೀರಿಸದೇ ಬೇರೆ ದಾರಿಯಾದರೂ ಇದೆಯಾ?

ಗುತ್ತಿಯ ದೈನ್ಯತೆ ಮತ್ತು ಸೆನ್ಸ್ ಆಫ್ ಹ್ಯೂಮರ್ ಹಾಗೂ ಒಂದು ಮಟ್ಟಿನ ಸುಳ್ಳುಪಳ್ಳು ಇಡೀ ಪಾತ್ರಕ್ಕೆ ಸೋಗು ತುಂಬಿದೆ. ಅದು ಮುಗ್ಧತೆ ಎನ್ನುವ ಸೋಗೂ ಆಗಬಹುದು. ಅದರ ಸೋಗಿನಲ್ಲೇ ಇತರರ ಅನುಕಂಪೆ ಪಡೆಯಲು ಸಾಧ್ಯ, ಯಾಮಾರಿಸಲೂ ಸಾಧ್ಯ ಮತ್ತು ಬಚಾವಾಗಬಲ್ಲ ಅನಿವಾರ್ಯದ ಕ್ರಮ ಎಂದು ಧ್ವನಿಸುವುದು ಕೂಡ ಸಾಧ್ಯ ಎಂಬಂತಿದೆ.

ಆಗಿನ ಸಾಮಾಜಿಕ ಸ್ಥಿತಿಯಲ್ಲಿ ಗುತ್ತಿಯದೂ ಅವನ ನಾಯಿಯಂಥದೇ ಪಾಡು. ಒಡೆಯನ ಪ್ರೀತಿಗಾಗಿ ಮತ್ತು ಅವ ಕೊಡುವ ಎಂಜಿಲಿಗಾಗಿ ಬಾಲ ಅಲ್ಲಾಡಿಸುತ್ತ ಹಿಂಬಾಲಿಸುವುದು ನಾಯಿಯ ಜೀತದಾಳುವಿನಂಥ ಮನಸ್ಥಿತಿ. ಅದೇ ಆಗಿನ ದಲಿತರ ಸ್ಥಿತಿಯೂ ಕೂಡ. ಗುತ್ತಿಗೆ ಅವನ ನಾಯಿ ನಂಬಿಕೆಯ, ಪ್ರೀತಿ, ನಿಷ್ಠೆಯ ಪ್ರತೀಕ. ಅವನ ಜೀವ ಉಳಿಸಬಲ್ಲ ನಂಬಿಕಸ್ಥ ಭಂಟನಂತೆ.

ಕೊನೆಯ ದೃಶ್ಯವಂತೂ ತುಂಬ ಸಾಂಕೇತಿಕವಾಗಿದೆ. ದೋಣಿ ದಾಟುವಾಗ, ಗುತ್ತಿ ಯಾವುದೋ ಹೆಗ್ಗಡೆಯರ ಸಹಾನುಭೂತಿ ಗಳಿಸಿಕೊಂಡಿರುತ್ತಾನೆ. 'ಹೇ ನಮ್ಮ ಹುಡುಗ ಕರಕೊಂಡು ಹೋಗ್ರೋ' ಎನ್ನುವ ಆದೇಶದಿಂದಾಗೇ ಗುತ್ತಿಗೆ ದೋಣಿಯಲ್ಲಿ ಜಾಗ ಸಿಗುತ್ತದೆ. ನಾಯಿಗೆ ಮಾತ್ರ ಅಲ್ಲಿ ಅವಕಾಶವಿಲ್ಲ. 'ಹುಲಿಯ' ಹೋಗೋ ಈಜೋ ದಾಟಿ ಆ ಕಡೆಗೆ ಬಾರೋ ನಾನು ಕಾಯತೀನಿ... ಎನ್ನುವ ಗುತ್ತಿ ನಾಯಿಯನ್ನು ಸೆಳವಿನ ಒಡಲಿಗಟ್ಟಿಬಿಡುತ್ತಾನೆ. ನಾಯಿ ಸೆಳವಿನಲ್ಲಿ ಕೊಚ್ಚಿ ಹೋಗುತ್ತದೆ. ಗುತ್ತಿ ರೋದಿಸುತ್ತಾನೆ. ಅಂದರೆ ಇಲ್ಲಿ ಗುತ್ತಿ ತಾನುಳಿದುಕೊಳ್ಳಲು ತನ್ನ ನಂಬಿಕೆಗಳನ್ನೇ ಬಲಿಕೊಡುತ್ತಾನೆ. ಕೇರಿಯ ನಂಬಿಕೆಗಳು, ಆಚಾರ, ವಿಚಾರ, ಜೀವಪರ ಆಶಯಗಳನ್ನು ಬಲಿಕೊಟ್ಟಂತೆ ಅದು. ಮೀಸಲಾತಿ ಅಂಥದೊಂದು ವ್ಯವಸ್ಥೆ. ಮೇಲ್ವರ್ಗದವರು ತಮಗೆಂದೇ ಮಾಡಿಕೊಂಡ ವ್ಯವಸ್ಥೆಯದು. ಗುತ್ತಿಯರು ತಮ್ಮ ಮುಗ್ಧತೆಗೋ ಅಥವಾ ಬದುಕಲೇಬೇಕೆಂಬ ಹಟಕ್ಕೋ ಬಲಿಕೊಡುವ ನಂಬಿಕೆಗಳವು. ಹೀಗೆ ಕೇರಿಗಳನ್ನು ಬಿಟ್ಟು ಕೋರ್ಟು, ಕಚೇರಿಗಳಲ್ಲಿ ಸೂಟು ಬೂಟು ಹಾಕಿಕೊಂಡು ಮೈಮರೆತು ಕಡೆಗೆ ಕೇರಿ ಮತ್ತು ಜೀವಪರ ಆಶಯಗಳನ್ನೇ ಮರೆತು ಕಂಫರ್ಟ್ ದೋಣಿಗಳಲ್ಲಿ ತೇಲುತ್ತ ಬದುಕುವ ಸೋಗಲಾಡಿತನದ ಸಂಕೇತವದು.

ಶುಕ್ರವಾರ, ಏಪ್ರಿಲ್ 30, 2010

ಭಾರತೀಯ ರಂಗಭೂಮಿ: ಹುಸೇನ್ ಎನ್ನುವ ಮಹಾಸಾಹಸಿ ರಂಗಕರ್ಮಿ

ರಾಮಾಯಣ ವಿಶ್ವದ ಒಂದು ದೊಡ್ಡ ಕಥೆ . ಅಂಥ ಕಥೆಯನ್ನು ರಂಗದ ಮೇಲೆ ಭವ್ಯವಾಗಿ ಹೇಳುವುದು ಒಂದು ರಂಗಸಾಹಸ. ನಾಟಕ ಎಂದರೆ ಕಥೆಯನ್ನೇ ಹೇಳಬೇಕಿಲ್ಲ. ಯಥಾವತ್ ಆಗಿ ಕಥೆಯನ್ನು ರಂಗದ ಮೇಲಿಡುವುದೂ ಅಲ್ಲ. ಒಂದು ವಸ್ತು ಪ್ರತಿ ಸಾರಿ ರಂಗದ ಮೇಲೆ ಬಂದಾಗ ಅದು ಹೊಸದೇ ಆಗಬೇಕು. ಹಾಗೆ ಹೊಸದಾಗಿಸುವುದಕ್ಕೆ ರಂಗಭೂಮಿಗೆ ಸಾಧ್ಯವಿದೆ. ಮತ್ತೆ ಇಡೀ ಇತಿಹಾಸ, ಪುರಾಣ ಅಥವಾ ಕಾದಂಬರಿಯ ಕಥೆಯನ್ನು ಅದರ ಪರಿಸರ ಸಮೇತ ಮರುಸೃಷ್ಟಿ ಮಾಡೋದು ಕೂಡ ಒಂದು ದೊಡ್ಡ ಸಾಹಸ. ಒಟ್ಟಿನಲ್ಲಿ ವಿಭಿನ್ನ ರಂಗಾನುಭವ ನೀಡುವ ಯತ್ನ ಪ್ರಶಂಸೆಗೆ ಪಾತ್ರವಾಗುತ್ತದೆ.

'ದಿ ಲೆಜೆಂಡ್ ಆಫ್ ರಾಮ'
ಟಿವಿಯಲ್ಲಿ ರಾಮಾಯಣ ಕಥಾಮಂಜರಿ ಪುಸ್ತಕಗಳಲ್ಲಿ ಬರುತ್ತಿದ್ದ ರಾಮಾಯಣ ಕಥಾನಕದ ಯಥಾವತ್ ಸೃಷ್ಟಿಯಂತೇ ಕಾಣಿಸಿತು. ಚಿಕ್ಕಂದಿನಿಂದ ಕಂಡ ಪ್ರಿಂಟೆಡ್ ರಾಮನ ಚಿತ್ರವೇ ಪರದೆ ಮೇಲೆ ಮಾತಾಡುತ್ತಿದೆ ಎನಿಸಿತು. ರಾಮಾಯಣ ಚಿತ್ರಗಳಲ್ಲಿ ಜೀವಂತವಾಗಿ ಇದ್ದಂತೆ  ತೆರೆಯ ಮೇಲೆ ಇರಲಿಲ್ಲ. ಪ್ರಿಂಟೆಡ್ ಚಿತ್ರಣದ ತಾಜಾತನ ತೆರೆಯ ಮೇಲಿನ ದೃಶ್ಯಗಳಲ್ಲಿ ಕಾಣೆಯಾಗಿತ್ತು. ಆದರೂ ಜನ ಅದನ್ನು ಸಾಕ್ಷಾತ್ ಶ್ರೀರಾಮಚಂದ್ರನ ದರುಶನದಂತೇ  ಭಾವಿಸಿದರು. ಭ್ರಮಿಸಿದರು. ಪೂಜಿಸಿದರು. ಮುದೇನೂರು ಸಂಗಣ್ಣ ಅವರ 'ಚಿತ್ರಪಟ' ನಾಟಕದಂಥ ರಾಮಾಯಣದ ವಿಭಿನ್ನ ನೋಟವಾಗಿ ರಮಾನಂದ ಸಾಗರ್ ಅವರ ರಾಮಾಯಣ ಡಿಡಿಯಲ್ಲಿ ಕಾಣಿಸಲಿಲ್ಲ. ಯಥಾವತ್ ಚಿತ್ರಣದ ಉದ್ದೇಶವಾಗಿದ್ದರಿಂದ ಅದು ಸಾಧ್ಯವೂ ಇರಲಿಲ್ಲ. ಆದರೆ, ಅದೊಂದು ಚಿತ್ರಸಹಿತ ಪುರಾಣ, ಪ್ರವಚನದಂತೆ ಅನಿಸಿದ್ದು ಅದರ ದೊಡ್ಡ ಮಿತಿ. ಡ್ರಾಮ್ಯಾಟಿಕ್ ಎಲಿಮೆಂಟ್ಸ್ ರಿಚ್ ಆಗಿದ್ದ ಕಾರಣದಿಂದ ಹೆಚ್ಚು ಕಸರತ್ತಿನ ಅಗತ್ಯವೂ ದೃಶ್ಯ ಸಂಯೋಜನೆಗೆ ಬೇಕಾಗಲಿಲ್ಲ. ಕ್ಯಾಮೆರಾ ಮತ್ತಿತರ ತಂತ್ರಜ್ಞಾನದ ಯಥೇಚ್ಚ ನೆರವೂ ಇತ್ತು. ಹೀಗಾಗಿ ರಮಾನಂದ ಸಾಗರ್ ಕೆಲಸ ಸುಲಭವಿತ್ತು. ತಂತ್ರಜ್ಞಾನದ ಚಮತ್ಕಾರಕ್ಕೆ ಎಲ್ಲವೂ ದಕ್ಕಿಬಿಟ್ಟಿತ್ತು. ಆದರೆ ಅದೇ ಕಥೆ ರಂಗದ ಮೇಲೆ ತರಬೇಕಾದರೆ  ದೃಶ್ಯದಲ್ಲಿ ಭವ್ಯತೆ ತರೋದು ತುಸು ತ್ರಾಸಿನ ಕೆಲಸವೇ.
ಇಂಥೆಲ್ಲ ಯೋಚನೆಗಳ ತಾಕಲಾಟದಿಂದ ರಂಗದ ಮೇಲೊಂದು ಭವ್ಯ ರಾಮಾಯಣ ಮೂಡಿಸುವ ಉಮೇದಿ ಹೊತ್ತ ದೆಹಲಿಯ ರಂಗಕರ್ಮಿಯೊಬ್ಬರು 'ದಿ ಲೆಜೆಂಡ್ ಆಫ್ ರಾಮ' ಪ್ರಯೋಗದ ಸಾಹಸಕ್ಕಿಳಿದರು. ಅದಕ್ಕೆ ಅವರು ಆಯ್ದುಕೊಂಡಿದ್ದು  ಪ್ರೊಸೀನಿಯಂ ಥಿಯೇಟರ್ ಒಂದನ್ನಲ್ಲ. ಮೂರು ಎಕರೆ ಭೂಮಿಯನ್ನೇ ರಾಮಾಯಣದ ಬ್ಯಾಟಲ್ ಫೀಲ್ಡ್ ಆಗಿ ಮರುಸೃಷ್ಟಿ ಮಾಡುವ ಸಾಹಸಕ್ಕಿಳಿದರು. ಒಂದು ಬೃಹತ್ ಕಥಾಹಂದರವನ್ನು 19 ಸೆಟ್ ನಿರ್ಮಿಸಿ, 35 ಕ್ಯಾರೆಕ್ಟರುಗಳ ಮೂಲಕ ಕಟ್ಟಿಕೊಡುವ ಯತ್ನ ಮಾಡಿದರು. ಅದಕ್ಕೆ ಕನಿಷ್ಠ 100 ಮಂದಿ ರಂಗತಂತ್ರಜ್ಞರು ತಮ್ಮ ಸೃಜನಶೀಲತೆಯನ್ನು ಧಾರೆ ಎರೆದರು. ಅದರ ನೆರವಿನಿಂದಲೇ ಇಡೀ ಭಾರತ ಮತ್ತು ವಿಶ್ವವೇ ಹುಬ್ಬೇರಿಸುವಂಥ ಪ್ರಯೋಗ ನಡೆದೇ ಹೋಯಿತು. ಈ ಪ್ರಯೋಗ ಸಾಕಾರಗೊಂಡು ವರ್ಷಗಳೇ ಸಂದಿವೆ.
ಇದೇ ರಾಮನನ್ನು ರೈಲ್ವೆ ಟ್ರ್ಯಾಕ್ ಮೇಲೆ ತರುವ ಸಾಹಸವೂ ನಡೆಯಿತು. ವಿವಿಧ ಸೆಟ್ ಗಳು ರೈಲು ಹಳಿಗಳ ಮೇಲೆ ಚಲಿಸಿದವು. ಪ್ರೇಕ್ಷಕರು ದೃಶ್ಯದಿಂದ ದೃಶ್ಯಕ್ಕೆ ಫಿಜಿಕಲ್ ಆಗಿ ಶಿಫ್ಟ್ ಆಗುತ್ತಿದ್ದರು. ಆಸನದ ವ್ಯವಸ್ಥೆಯೂ ರೈಲುಗಳ ಹಳಿ ಮೇಲಿತ್ತು. ಇಂಥದೊಂದು ಸಾಹಸಕ್ಕೆ ಕೆಲ ಕೋಟಿ ರೂಪಾಯಿಗಳು  ಖರ್ಚಾಗಿತ್ತು.

'ಷಹನಷಾನಾಮಾ'
ಇದೇ ರಂಗಕರ್ಮಿ ಮತ್ತೊಂದು ವಸ್ತುವನ್ನು ಎತ್ತಿಕೊಂಡರು. ಅದು ಭಾರತದ ಬಹುಮುಖ್ಯವಾದ ಇತಿಹಾಸ.  'ಷಹನಷಾನಾಮಾ' ಎನ್ನುವ ಮೊಘಲ್ ಸಾಮ್ರಾಜ್ಯದ ವೈಭವ, ದುರಂತ ಮತ್ತು ರಾಜಕೀಯ ಹೇಳುವ ನಾಟಕವದು. ಇಡೀ ಮೊಘಲ್ ಕಾಲದ ವಾತಾವರಣದ ಮರುಸೃಷ್ಟಿಯ ಕಠಿಣ ಸಾಹಸ ಅದಾಗಿತ್ತು. ಕೋಟೆ ಎಂದರೆ ಕೋಟೆಯೇ, ಸಿಂಹಾಸನವೆಂದರೆ ಆ ಕಾಲದ ಸಿಂಹಾಸನವೇ. ... ಎಲ್ಲ ಅದದೇ ಆಗಿ ಕಾಣಿಸುವ ದೊಡ್ಡ ಸಾಹಸ! ಒಂದು ನಾಟಕ ಯಾವುದೋ  ಕಟ್ಟಡದ ಸೀಮಿತ ಜಾಗೆಯಲ್ಲಿ ಸಿಕ್ಕು ಸಾಂಕೇತಿಕವಾಗುವುದಕ್ಕಿಂತ ಹೀಗೆ ತಾನೇ ತಾನಾಗಿ ಒಂದುಕಡೆ ಮರುಸೃಷ್ಟಿಯಾಗಿ ಬಿಡೋದು  ಈ ಥರದ ರಂಗಸಾಹಸದ ವೈಶಿಷ್ಠ್ಯ.


ದಿ ಫಿಫ್ಟಿ ಡೇ ವಾರ್
ಕಾರ್ಗಿಲ್ ಯುದ್ಧದ ಸಂದರ್ಭ ದೇಶಪ್ರೇಮ ಉಗ್ರ ಭಕ್ತಿಯ ಸ್ವರೂಪ ತಾಳಿದ್ದ ಸಮಯವದು. '1947ರ ನಂತರ ಇಡೀ ಭಾರತ ಒಗ್ಗಟ್ಟಾಗಿ ದೇಶಕ್ಕಾಗಿ ಬೆಂಬಲಕ್ಕೆ ನಿಂತಿದ್ದು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ' ಎನ್ನುವುದು ಈ ರಂಗಕರ್ಮಿಯ ವಾದ. ಇರಬಹುದು. ಯುದ್ಧದ ವಸ್ತುವನ್ನಿಟ್ಟುಕೊಂಡು ಪ್ರಾಣತೆತ್ತ ಯೋಧರ ಸ್ಮರಣೆಗಾಗಿ ರಂಗಪ್ರಯೋಗವೊಂದು ನಡೆಯಿತು. ಮೆಹ್ರೋಲಿಯಲ್ಲಿ ಆರು ಎಕರೆ ಪ್ರದೇಶ ಕಾರ್ಗಿಲ್ ಯುದ್ಧದ ಮರುಸೃಷ್ಟಿಗೆ ಸಜ್ಜಾಯಿತು. ಪ್ರೇಕ್ಷಕರು ದೃಶ್ಯದಿಂದ ದೃಶ್ಯಕ್ಕೆ ಸ್ಥಳಾಂತರಗೊಳ್ಳಲು ಟ್ರ್ಯಾಕ್ ರೂಪಿಸಲಾಯಿತು. ಅಲ್ಲಲ್ಲಿ ಹಿಮಾಲಯ ವರ್ವತವೇ ನಾಚುವಂಥ ಮಂಜಿನ ಪರ್ವತಗಳು ಸೃಷ್ಟಿಯಾದವು, ನಕಲಿ ಹೆಲಿಕಾಪ್ಟರ್ ಗಳು ಥೇಟು ಯುದ್ಧ ವಿಮಾನಗಳಂತೆ ಆರ್ಭಟಿಸಿದವು. ಗನ್ ಪೌಡರ್ ನಿಂದ ಮದ್ದು, ಗುಂಡು, ರಾಕೆಟ್ ಲಾಂಚರ್ ಗಳು ಅಬ್ಬರಿಸಿದವು. ಇಡೀ ರಂಗಭೂಮಿ ಯುದ್ಧಭೂಮಿಯ ರೌದ್ರಾವತಾರ ತಾಳಿತ್ತು. ಸೈನಿಕರ ವೀರಾವೇಶ, ಗಾಯಗೊಂಡ ಯೋಧರ ಆಕ್ರಂದನ, ಯುದ್ಧದ ಭೀಕರತೆ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರಲೇಬೇಕು... ಹೀಗೆ 'ದಿ ಫಿಫ್ಟಿ ಡೇ ವಾರ್' ರಂಗಪ್ರಯೋಗ ನಡೆದು ಹಲವಾರು ಪ್ರದರ್ಶನಗಳನ್ನು ಅಲ್ಲೇ ಕಂಡಿತು.
ಇಂಥ ಅನೇಕ ಸಾಹಸಗಳನ್ನು ಮಾಡಿದ ದೆಹಲಿಯ ರಂಗಕರ್ಮಿ ಭಾರತೀಯ ರಂಗಭೂಮಿಯನ್ನು ಒಂದು ಹೊಸ ಆಯಾಮಕ್ಕೆ ಕೊಂಡೊಯ್ದರು. ಅವರೇ ಅಮೀರ್ ರಜಾ ಹುಸೇನ್.
ವಿಶೇಷವಾಗಿ ದೆಹಲಿ ರಂಗಭೂಮಿಗೆ ಅತ್ಯಂತ ಪರಿಚಿತ ಹೆಸರು. ನೂರಾರು ನಾಟಕಗಳನ್ನು ನಿರ್ದೇಶಿಸಿದ, ಸ್ವತಃ ನಾಟಕಕಾರರೂ ಆದ ಅಮೀರ್ ರಜಾ ಹುಸೇನ್ ಇಂಥ ಅದೆಷ್ಟು ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಹುಸೇನ್, ರಂಗಭೂಮಿಯನ್ನೇ ತಮ್ಮ ಬದುಕಿನ ಬಹುದೊಡ್ಡ ಕನಸಾಗಿಸಿಕೊಂಡಿದ್ದು, ಮಾರ್ಗವಾಗಿಸಿಕೊಂಡಿದ್ದೊಂದು ರೋಚಕ ಇತಿಹಾಸ. ಇವರು ಕೋಟಿ ಹುಸೇನ್ ಎಂದೇ ಭಾರತೀಯ ರಂಗಭೂಮಿಯಲ್ಲಿ ಪರಿಚಿತರು.
ನಮ್ಮ ನಾಡಿನ ಲೇಖಕ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿ ಒಂದು ದೊಡ್ಡ ಸಾಹಿತ್ಯ ಕೃತಿ. ಅದನ್ನು ರಂಗದ ಮೇಲೆ ಪಾತ್ರಗಳ ಮೂಲಕ ನಡೆದಾಡಲು ಬಿಡುವ ಸಾಹಸಕ್ಕೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಸಿ. ಬಸವಲಿಂಗಯ್ಯ ಇಳಿದಿದ್ದಾರೆ.
ಹೊಸತನದ ಕೊರತೆಯಿಂದ ಕಳೆಗುಂದಿದ ರಂಗಭೂಮಿಗೆ ಇಂಥ ಸಾಹಸಗಳ ಅಗತ್ಯ ಇತ್ತು. ಆದರೂ ಹುಸೇನ್ ಥರ ಕೋಟಿ ಕೋಟಿ ಸುರಿಯುವ ಕಾಸ್ಟ್ಲೀ ರಂಗಭೂಮಿ ಬೇಕಿತ್ತಾ? ಎನ್ನುವ ಪ್ರಶ್ನೆಯೂ ಅರ್ಥಪೂರ್ಣ ಮತ್ತು ಮಹತ್ವದ್ದೇ. ನಾಟಕ ನೋಡುವ ಕುತೂಹಲ ನನಗೂ ಇದೆ. ನೋಡೋಣ. ಒಟ್ಟಾರೆ ಬಸು ಇಂಥದೊಂದು ಸಾಹಸಕ್ಕೆ ಕೈಹಾಕಿದ್ದು ಕೇಳಿದಾಗ ಅಮೀರ್ ರಜಾ ಹುಸೇನ್ ಸಾಹಸದ ರಂಗಭೂಮಿ ತಟ್ಟನೆ ನೆನಪಾಯ್ತು.
ಮಲೆಗಳಲ್ಲಿ ಮದುಮಗಳನ್ನು ಕಂಡು ಬರುತ್ತೇನೆ. ಸಾಧ್ಯವಾದರೆ ಇಲ್ಲಿ ಬರೀತೀನಿ.

ಶನಿವಾರ, ಫೆಬ್ರವರಿ 20, 2010

rural water management

Rural Water Management in Africa: The Impact of Customary Institutions in Tanzania


Author: Leticia K. Nkonya

Pub. Date: Date: 28-Sep-08
Pages 372
List Price $114.95 / £ 67.95

--------------------------------------------------------------------------------



Description

As one of the most important natural resources, the management of water is becoming increasingly important as water resources are growing more scarce. This is especially the case for rural areas and developing countries, such as Africa. In sub-Saharan African (SSA) countries today, the demand for water resources is increasing. Rising demand is caused by rapid population growth, industrialization, and urbanization. Since water supplies have not kept pace with demand, water resources have been overutilized and polluted, leading to water shortage. Most people in SSA experience lack of access to safe water, a great concern especially in rural areas where most of the poor live. It is estimated that only about 45% of the population in SSA has access to safe water.



Lack of access to safe water has a disastrous impact on society, especially on women and children, who suffer in terms of illnesses and lost opportunities. It is estimated that rural people in SSA, mainly women and children, spend about 40 billion hours each year fetching water. Moreover, lack of access to safe water traps rural people in the vicious cycle of poverty: water-related illnesses reduce one’s ability to engage in a full day of productive work, which in turn increases poverty and the risk of subsequent illnesses. For these reasons, efficient management of water resources is a key to fighting poverty and a fundamental building block for sustainable development.



During the past thirty years, the management of water resources in most SSA countries was the responsibility of central governments. Unfortunately, many large water projects that were established and managed by central governments in SSA failed, mainly due to a lack of community participation in planning and implementing such projects. The people therefore had to work out their own system of water management.



In this innovative study, the author examines these forms of traditional or customary institutions of water management in a manner that has never been done before. First, the author provides us with an understanding and appreciation of the differential impact of customary institutions on drinking- and irrigation-water management. Most sociological studies on rural water management in SSA have addressed water-management issues without adequately analyzing customary institutions and showing how they affect rural water management. Most studies in river-basin management focus on water for irrigation. Few studies have examined how the customary and statutory institutions influence water management for different water uses. This study looks at how the management of water for domestic use differs from the management of water for livestock and small-scale irrigation.



The second unique contribution of this book is the analysis of the role of women and how customary and statutory institutions affect women’s participation in water management. Few studies have looked at the role of women and their contribution to rural water management. Previous studies have focused only on the statutory institutions.



Finally, the study offers a valuable comparison of the effectiveness of statutory and customary institutions in enforcement of their regulations, resolving natural-resource conflicts, and in ensuring access to water for different uses. Although many researchers recognize the importance of customary institutions, their analysis tends to focus more on the statutory institutions for water management. In this book, both formal and informal water-management institutions are considered for a more balanced understanding.



The findings of this study will serve as the basis for formulating policies and programs that include customary institutions in the management of rural water resources in Tanzania. In Tanzania, lack of access to safe water for many rural populations is a major concern. Lack of safe water has implications for rural people and the country as a whole. Policy makers, nongovernmental organizations, planners, and water providers need to be informed so they can incorporate customary institutions into policies and strategies for management of rural water resources.



This is an important book for African studies, environmental studies, and policy studies.

courtesy: net




--------------------------------------------------------------------------------

ಶನಿವಾರ, ಜನವರಿ 30, 2010

ವಿವಿ ಅಲುಮ್ನಿ ಮೀಟ್... ತೋಬತೆಕ್ ಸಿಂಗ್ ನಾಟಕ, ಕೆಲ ಮಡುಗಟ್ಟಿದ ನೋವು..

ವಿಶ್ವವಿದ್ಯಾಲಯ... ಅರಿವಿನ (ಜ್ಞಾನ) ದೊಡ್ಡ ವಿಶ್ವವೇ ತೆರಕೊಳ್ಳುವ ತಾಣ. ನಾವು ಆಯ್ದುಕೊಂಡ ವಿಷಯದ ಸಮಗ್ರ ವಿಶ್ವವೇ ಅಲ್ಲಿ ದರ್ಶನವಾಗಬೇಕು. ಹೀಗಾಗುವುದುಂಟೆ!(?)


ಪತ್ರಿಕೋದ್ಯಮ ಎಂದರೆ ಪತ್ರಿಕೆಗೆ ಕೆಲಸ ಮಾಡುವುದು... ಅದನ್ನು ಹೇಗೆ ಮಾಡಬೇಕು? ಇದನ್ನು ಕಲಿಸುವುದೇ ವಿಶ್ವವಿದ್ಯಾಲಯ! ಹೀಗೆಂದುಬಿಟ್ಟರೆ... ಬರವಣಿಗೆ, ವರದಿ, ಎಡಿಟಿಂಗ್... ಬಗ್ಗೆ ಟಿಪ್ಸ್ ಕೊಡುವ ಕೆಲಸ ಮಾತ್ರ ವಿವಿಗಳದ್ದಾಗಿಬಿಡುತ್ತದೆ. ಸುಮಾರು ವರ್ಷಗಳ ಹಿಂದೆ ವಿವಿಗಳ ಸ್ಥಿತಿ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನಕ್ಕೆ ಸಂಬಂಧಿಸಿ) ಇದಕ್ಕೂ ಭಿನ್ನವೇನಿರಲಿಲ್ಲ. ಇದೇ ಸ್ಥಿತಿ ಈಗಲೂ ಇರಬಹುದು. ಕಾಲೇಜುಗಳಲ್ಲೂ...

ಆದರೆ, ಇದೆಲ್ಲ ಮಿತಿಗಳನ್ನು ಮೀರಿ ಎಂಎ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಅನ್ನು ತುಂಬ ಆಸ್ಥೆಯಿಂದ, ಆಸಕ್ತಿಯಿಂದ ಮತ್ತು ಅರ್ಥಪೂರ್ಣವಾಗಿ ಅಧ್ಯಯನ ಮಾಡುವ ಉಮೇದಿಯ ನನ್ನಂಥ ಹುಡುಗರು ಅನೇಕರಿದ್ದರು. ಸಮೂಹ ಮಾದ್ಯಮ ಅಥವಾ ಒಟ್ಟಾರೆ ಮಾಧ್ಯಮ ಪರಿಕಲ್ಪನೆಯ ಬಗ್ಗೆ ನನಗಂತೂ ಚೆನ್ನಾಗಿ ತಿಳಿದಿತ್ತು. ಥಿಯೇಟರ್, ಸಿನಿಮಾ, ಟಿವಿ, ಡಾಕ್ಯುಮೆಂಟರಿ, ಬೀದಿನಾಟಕ, ಸಾಕ್ಷರತಾ ಚಳವಳಿ, ಜಾಥಾ, ಶಿಬಿರ... ಹೀಗೆ ಮಾಧ್ಯಮದ ಹಲವು ಆಯಾಮಗಳಲ್ಲಿ ನಾನಾಗಲೇ ಸಕ್ರಿಯನಾಗಿ ತೊಡಗಿಕೊಂಡಿದ್ದವ. ಸಮೂಹ ಮಾದ್ಯಮದ ಕೆಲಸ, ಪಾತ್ರ ಮತ್ತು ಅದರ ಪರಿಣಾಮ, ಫಲಿತಾಂಶಗಳ ಬಗ್ಗೆಯೂ ಚೆನ್ನಾಗಿ ಅರಿವಿಟ್ಟುಕೊಂಡೇ ವಿವಿ ಶಿಕ್ಷಣದ ಹೊಸ್ತಿಲು ತುಳಿದಿದ್ದೆ (ಈ ವಿಭಾಗಕ್ಕೆ ಬರಲು ಪ್ರೇರಣೆಯಾಗಿದ್ದ ಗೆಳೆಯ ಎ.ವೈ. ಹಾದಿಮನಿ ಮತ್ತು ಹೊಸಮನಿ ಅವರನ್ನು ಹಾಗೂ ಒಬ್ಬ ಪ್ರೊಫೆಸರ್ ಗಿಂತ ಅಪಾರ ಜ್ಞಾನ ಹೊಂದಿದ್ದ ಮತ್ತು ಜರ್ನಲಿಸಂ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತಿದ್ದ ಮಹೇಶ್ ನಾವಳ್ಳಿ ಎನ್ನುವ ಗ್ರೇಟ್ ಸೋಲ್ ಅನ್ನು ಪ್ರೀತಿಯಿಂದ ನೆನೆಯುತ್ತೇನೆ). ಅದಕ್ಕೂ ಮುಂಚೆ ಎಂಎಸ್ಸಿ ಎರಡು ವರ್ಷ ಮಣ್ಣೆಳೆದು, ಏನೇನೋ ತಲೆಕೆಡಿಸಿಕೊಂಡು ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಹಾಳುಮೂಳು ಓದಿ, ಬರೆದು ಸುಸ್ತಾಗಿ ಅದನ್ನು ಎಡಗಾಲಿಂದ ಒದ್ದು ಬಂದಿದ್ದೆ.

ಪ್ರಗತಿಪರ ಧೋರಣೆಯ ಚಿಂತನೆಗಳು ನಮ್ಮೊಳಗೆ ಉಸಿರಾಡುತ್ತಲೇ ಇದ್ದ ದಿನಗಳವು. ಈ ಸಮಾಜಕ್ಕೆ, ಜಗತ್ತಿಗೆ ಏನನ್ನಾದರೂ ಅರ್ಥಪೂರ್ಣವಾದುದನ್ನು ಕೊಡಬೇಕು. ಆ ಮೂಲಕ ನಾವೂ ಬೆಳೆಯಬೇಕು. ಹುಟ್ಟಿದ್ದು ಸಾರ್ಥಕ ಎನ್ನುವಂಥ ಕೆಲಸ ಮಾಡಬೇಕು ಅಂದುಕೊಂಡಂಥ ಗೆಳೆಯರ ಸಮರ್ಥ ಪಡೆಯೇ ಆಗಿತ್ತು. ಅಂಥವರಲ್ಲಿ ನಾನೂ ಒಬ್ಬನಾಗಿದ್ದೆ ಎಂದು ಖಚಿತವಾಗಿ ಹೇಳಬಲ್ಲೆ.

ನಾನಿನ್ನೂ ಡಿಗ್ರಿ (ಫಿಜಿಕ್ಸ್, ಎಲೆಕ್ಟ್ರಾನಿಕ್ಸ್) ಓದುತ್ತಿದ್ದೆ. ನಮ್ಮದೊಂದು ಮ್ಯಾಡ್ಸ್ (ಮ್ಯಾಥ್ಯೂ, ಆನಂದ್, ದಿಲ್, ಶ್ರೀಧರ್... ಈ ನಾಲ್ಕೂ ಹೆಸರಿನ ಮೊದಲ ಲೆಟರ್ ಸೇರಿ ಆಗಿದ್ದೇ ಮ್ಯಾಡ್ಸ್) ಗ್ಯಾಂಗ್ ಇತ್ತು. ಚರ್ಚೆ, ವಿಚಾರಸಂಕಿರಣ, ರೆಡಿಯೊ ಕಾರ್ಯಕ್ರಮ, ಬೀದಿನಾಟಕ, ಸ್ಟೇಜ್ ಶೋ... ಹೀಗೆಲ್ಲ ದೊಡ್ಡ ಹರವು ನಮ್ಮದು.

ಪ್ರತಿ ಶನಿವಾರ ಸಂಜೆ ನಾವೊಂದು ಗ್ರಾಮಕ್ಕೆ ತೆರಳುತ್ತಿದ್ದೆವು. ಬಸ್ ನಲ್ಲಿ ಹೋಗುವಾಗ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಮಗೆ ತೋಚಿದ ವಿಚಾರಗಳನ್ನು ಭಾಷಣ, ಚರ್ಚೆ ಮಾಡುತ್ತ ಸಾಗುತ್ತಿದ್ದೆವು. ಪ್ರಯಾಣಿಕರು ತುಂಬ ಕುತೂಹಲದಿಂದ ನಮ್ಮ ವಿಚಾರಗಳನ್ನು ಆಲಿಸುತ್ತಿದ್ದರು. ರಿಯಾಕ್ಟ್ ಮಾಡುತ್ತಿದ್ದರು.

ಸಂಜೆ ಹಳ್ಳಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೀದಿನಾಟಕದ ಶೋ ನೀಡುತ್ತಿದ್ದೆವು. ಬಡತನ, ಅನಕ್ಷರತೆ, ಲಂಚ, ಭ್ರಷ್ಟಾಚಾರ, ವಿಜ್ಞಾನ, ಮೂಢನಂಬಿಕೆ, ಕೋಮುವಾದ, ಏಯ್ಡ್ಸ್... ಹೀಗೆ ಎಲ್ಲದರ ಬಗ್ಗೆ ನಮ್ಮದೇ ಚಿಂತನೆಗಳನ್ನು ಹೇಳುವ ಬೀದಿನಾಟಕಗಳು, ವಿಚಾರಸಂಕಿರಣಗಳು... ಅದೆಷ್ಟು ಮಾಡಿದೆವೋ...

ಶ್ರೀಧರ್ ಎನ್ನುವ ಗೆಳೆಯ ಪ್ರತಿ ಭಾನುವಾರ ದಿ ಹಿಂದೂ ಪೇಪರ್ ಖರೀದಿಸುತ್ತಿದ್ದ. ಅದನ್ನು ಕೂತು ಎಲ್ಲರೂ ಪೇಜ್ ಹಂಚಿಕೊಂಡು ಓದುತ್ತಿದ್ದೆವು. ಸುಮಾರು ಹೆಚ್ಚೂ ಕಮ್ಮಿ ನಲವತ್ತು ಪುಟದಷ್ಟು ಬರುತ್ತಿದ್ದ ಆ ಪೇಪರ್ ಮುಗಿಯುವತನಕ ನಾವು ಆಜಾದ್ ಉಪವನ ಬಿಟ್ಟು ಕದಲುತ್ತಿರಲಿಲ್ಲ. ಆನಂದ ಆಗಲೇ ಟೈಂಸ್, ರೀಡರ್ಸ್ ಡೈಜೆಸ್ಟ್ ಚಂದಾದಾರನಾಗಿದ್ದ. ಆಗಾಗ ಫ್ರಂಟ್ ಲೈನ್.... ಏನೇನೋ ಮ್ಯಾಗಜೀನ್, ಏನೆಲ್ಲ ಹೊಸ ಪುಸ್ತಕಗಳನ್ನು ತರುತ್ತಿದ್ದ. ಅವನ್ನೆಲ್ಲ ಓದ್ತಾ ಇದ್ದೆವು. ಅಲ್ಲಿನ ಎಷ್ಟೊ ವಿಚಾರಗಳು ನಮ್ಮ ವಿಚಾರಕ್ಕೆ ಹೋಲುತ್ತವಲ್ಲಾ... ಎನ್ನುವ ಅಚ್ಚರಿಯೂ ನಮ್ಮೊಳಗಿತ್ತು.

ಎನ್ ಎಸ್ ಎಸ್ ನಮ್ಮ ಇಂಥ ವಿಚಾರಗಳಿಗೆ ಬಹುಮುಖ್ಯವಾದ ಪ್ಲ್ಯಾಟ್ ಫಾರಂ ಆಗಿತ್ತು ಎನ್ನುವುದು ನನ್ನ ಭಾವನೆ. ಸುಮಾರು ನೂರು ವಿದ್ಯಾರ್ಥಿಗಳ ಬ್ಯಾಚಿಗೆ ನಾನು ಲೀಡರ್. ಅದಕ್ಕಾಗಿ ನಡೆದ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದೆ. ನಾವು ಆಗ ಮಾಡಿದ ಅದೆಷ್ಟು ಕೆಲಸಗಳು ಜನಮೆಚ್ಚುಗೆ ಗಳಿಸಿಕೊಂಡಿದ್ದವು.

ಪ್ರತಿವಾರದ ಕ್ಯಾಂಪಸ್ ಚಟುವಟಿಕೆಗಳು ಮತ್ತು ಎನ್ ಎಸ್ ಎಸ್ ಬಗ್ಗೆ ನಾನೇ ಸ್ವತಃ ವರದಿ ತಯಾರಿಸಿ, ಅದಕ್ಕೆ ಫೋಟೊ (ಬ್ಲಾಕ್ ಅಂಡ್ ವೈಟ್) ಹೊಂದಿಸಿಕೊಂಡು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಶ್ವವಾಣಿ, ಕನ್ನಡಮ್ಮ, ನವನಾಡು, ವಿಶಾಲ ಕರ್ನಾಟಕ, ಹಿಂದೂ, ಇಂಡಿಯನ್ ಎಕ್ಸ್ ಪ್ರೆಸ್... ಪೇಪರುಗಳ ಹುಬ್ಬಳ್ಳಿ ಕಚೇರಿಗಳಿಗೆ ಕೊಟ್ಟು ಬರ್ತಿದ್ದೆ. ಸೋಮವಾರ ಅಷ್ಟೆಲ್ಲ ಪೇಪರುಗಳನ್ನು ಖರೀದಿಸಿ ವರದಿಗಳನ್ನು ಕತ್ತರಿಸಿ ಒಂದು ಡ್ರಾಯಿಂಗ್ ಶೀಟ್ ಮೇಲೆ ನೀಟಾಗಿ ಅಂಟಿಸಿ ಕಾಲೇಜಿನ ನೋಟಿಸ್ ಬೊರ್ಡಿಗೆ ಹಚ್ಚುತ್ತಿದ್ದೆ. ಬೆಳಿಗ್ಗೆ ಕ್ಯಾಂಪಸ್ ಹುಡುಗ, ಹುಡುಗಿಯರೆಲ್ಲ ಮುಗಿಬಿದ್ದು ನೋಡುತ್ತಿದ್ದರು. ಪ್ರತಿ ಸೋಮವಾರ ಎಲ್ಲರೂ ನೋಟಿಸ್ ಬೋರ್ಡ್ ನಿರೀಕ್ಷಿಸುವ ಹಾಗೆ ಮಾಡುತ್ತಿದ್ದುದು ನನಗೆ ತುಂಬ ಖುಷಿ ಕೊಡುತ್ತಿತ್ತು.

ವಾರ್ಷಿಕ ಎನ್ ಎಸ್ ಎಸ್ ವಿಶೇಷ ಶಿಬಿರಕ್ಕೆಂದು (ಒಂದು ತಿಂಗಳಿಗೂ ಹೆಚ್ಚು ಅವಧಿಯದ್ದು) ಹಳ್ಳಿಗೆ ತೆರಳುತ್ತಿದ್ದೆವು. ಆ ಹಳ್ಳಿಯಲ್ಲಿ ನಮ್ಮ ಇಡೀ ಕಾಲೇಜು ತಂಡ ಫೇಮಸ್ ಆಗಿತ್ತು. ನಾನಲ್ಲಿ ಹಲವಾರು ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿದೆ. ನೂರಾರು ಕ್ರಾಂತಿ ಹಾಡುಗಳನ್ನು ಹಾಡಿದೆ. ಸಿದ್ದಲಿಂಗಯ್ಯನವರ 'ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ...' ಹಾಡು ಹೇಳುವಾಗಲಂತೂ ಮೈಕೂದಲು ನೆಟ್ಟಗಾಗುತ್ತಿದ್ದ ಉತ್ಸಾಹ, ಫೋರ್ಸ್ ಪುಟಿದೇಳುತ್ತಿದ್ದ ವಯಸ್ಸು ಅದು. ಅತ್ಯಂತ ಕಡಿಮೆ ಅವಧಿಯಲ್ಲೇ ಇಡೀ ಊರಿನ ಒಂದೊಂದು ಮನೆಗೂ ನಾವು ಅವರ ಮನೆಯ ಮಕ್ಕಳಂತೆ ಆಗಿಬಿಟ್ಟಿದ್ದೆವು.

ವಿಶೇಷ ಶಿಬಿರಕ್ಕೆ ಹಲವು ಗಣ್ಯರು ಬರುತ್ತಿದ್ದರು. ಕಾಲೇಜು ಪ್ರಿನ್ಸಿಪಾಲ್ ದೇವಧರ್ ತಪ್ಪದೇ ಬರುತ್ತಿದ್ದರು. ಪ್ರೊ ವಿಕ್ಟರ್ ನಿತ್ಯ ಬೈಬಲ್ ಓದಿ ಹೇಳುತ್ತಿದ್ದರು. ನಮಗೆಲ್ಲ ಪ್ರಾರ್ಥನೆ ಮಾಡಿಸುತ್ತಿದ್ದರು. ನಮಗ್ಯಾರಿಗೂ ಅದೊಂದು ಮುಜುಗರ ತರಲೇ ಇಲ್ಲ, ಬದಲಾಗಿ ಬೈಬಲ್ ದರ್ಶನವಾಯ್ತಲ್ಲ ಎನ್ನುವ ಭಾವನೆ ಬೆಳೆದಿತ್ತು. ಬಂದ ಗಣ್ಯರಿಗೆಲ್ಲ ಪ್ರಿನ್ಸಿಪಾಲ್ ನನ್ನನ್ನು ವಿಶೇಷವಾಗಿ ಪರಿಚಯಿಸಿ ನಮ್ಮ ಕಾಲೇಜಿನ ಹೆಮ್ಮೆಯ ಲೀಡರ್ ಎಂದು ಬೆನ್ನು ತಟ್ಟಿದ್ದನ್ನು ಮತ್ತು ಕಾಲೇಜಿನ ಸಾವನೀರ್ ನಲ್ಲಿ ಪ್ರಿನ್ಸಿಪಾಲ್ ಬರೆವ ಕಾಲೇಜಿನ ವಾರ್ಷಿಕ ವರದಿಯಲ್ಲಿ ನನ್ನ ಹೆಸರನ್ನೂ ಪ್ರಸ್ತಾಪ ಮಾಡಿದ್ದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿತ್ತು. ಅದನ್ನು ನಾನೆಂದೂ ಮರೆಯಲಾರೆ ( ಇಂಥದೇ ಅಭಿಮಾನ ನಾನು ಎಂಎಸ್ಸಿ ಓದುತ್ತಿದ್ದಾಗ ವಿಭಾಗದ ವಾರ್ಷಿಕ ವರದಿಯಲ್ಲಿ ನನಗೆ ಒಲಿದಿತ್ತು). ಶಿಬಿರ ಮುಗಿದಾಗ ಸಮಾರೋಪ ಸಮಾರಂಭದ ನಂತರ ಮಂಡಿಹಾಳ ಊರ ಜನರೆಲ್ಲ ಸೇರಿ ನನಗೊಂದು ಸನ್ಮಾನ ಮಾಡಿದರು. ದೊಡ್ಡ ಹಾರ ಹಾಕಿ, ಕೈಗಷ್ಟು ಹೋಗುಚ್ಛ ನೀಡಿ, ಸಣ್ಣ ಕಾಣಿಕೆಯೊಂದನ್ನು ಕೊಟ್ಟು ಕೆಲವರು ಬೆನ್ನು ತಟ್ಟಿ, ಹಣೆಗೆ ಮುತ್ತನ್ನಿಟ್ಟು ತೋರಿದ ಅಕ್ಕರೆ, ಕೆಲಸ ಗುರುತಿಸಿ ನೀಡಿದ ಮನ್ನಣೆ ನನ್ನ ನೆನಪಿನಲ್ಲಿ ಸದಾ ಹಸಿರು. ಆ ಕ್ಷಣಗಳನ್ನು ನಾನೆಂದೂ ಮರೆಯಲಾರೆ.

'ಶಿಬಿರವಾಣಿ'

ಶಿಬಿರಕ್ಕೆ ಬಂದವರ ಭಾಷಣ, ವಿಚಾರ ಕೇಳಿಸಿಕೊಂಡು ನಾನೇ ವರದಿ ಬರೆಯುತ್ತಿದ್ದೆ. ಈ ಸಲ ಅವನ್ನು ಪತ್ರಿಕೆಗೆ ಕೊಡುವುದರ ಜತೆಗೆ ನಾನೇ ಒಂದು ಪುಟ್ಟ ಪತ್ರಿಕೆ ರೂಪಿಸಿ ಅದರಲ್ಲಿ ಪ್ರಕಟಿಸುವುದನ್ನು ಪ್ರಾರಂಭಿಸಿದೆ. ಅದೆಂಥ ಪತ್ರಿಕೆ ಗೊತ್ತಾ... ಒಂದಷ್ಟು ಡ್ರಾಯಿಂಗ್ ಶೀಟುಗಳು, ಅದರ ಮೇಲೆ ನೀಟಾಗಿ ಇಂಡಿಯನ್ ಇಂಕ್ ನಿಂದ ವರದಿ ಬರೆಯುತ್ತಿದ್ದೆ. ನನ್ನಣ್ಣ ತಂದುಕೊಟ್ಟ ಒಂದು ಪುಟ್ಟ ಕ್ಯಾಮೆರಾ ಇತ್ತು. ಅದರಿಂದ ತೆಗೆದ ಫೊಟೊಗಳನ್ನು ಧಾರವಾಡಕ್ಕೆ ತೆರಳಿ, ಡೆವಲಪ್ ಮಾಡಿಸಿ, ಪ್ರಿಂಟ್ ಹಾಕಿಸಿಕೊಂಡು ಬರುತ್ತಿದ್ದೆ. ಅವೇ ಫೊಟೊಗಳನ್ನು ಕ್ಯಾಪ್ಷನ್ ಸಮೇತ ವರದಿಗಳ ನಡುವೆ ಅಂಟಿಸುತ್ತಿದ್ದೆ. ಜತೆಗೆ ಕಿರುಕಥೆ, ಕವಿತೆ, ಚುಟುಕು, ಜನರಲ್ ನಾಲೆಡ್ಜ್, ಕಾರ್ಟೂನ್ ಇತ್ಯಾದಿ ವಿಶೇಷವೂ ಪತ್ರಿಕೆಯಲ್ಲಿ ಇರುತ್ತಿತ್ತು. ಶಿಬಿರಾರ್ಥಿಗಳು ಬೆಳಿಗ್ಗೆ ಕಣ್ಣೊರೆಸಿಕೊಳ್ಳುವಷ್ಟೊತ್ತಿಗೆ ನೋಟಿಸ್ ಬೊರ್ಡ್ ಮೇಲೆ ಅದು ಪ್ರಕಾಶನಗೊಳ್ಳುತ್ತಿತ್ತು. ಆ ಪತ್ರಿಕೆ ಹೆಸರು 'ಶಿಬಿರವಾಣಿ' . ಲೋಗೊ ಶಾಂತಿ ಸಂದೇಶ ಸಾರುವ ಪಾರಿವಾಳ ಮತ್ತು ಎಲ್ಲ ಧರ್ಮಗಳ ಸಿಂಬಲ್ ಪ್ರತಿನಿಧಿಸುವ ಒಂದು ಚಿತ್ರ. ಹೀಗೆ ನನ್ನ ಕಲ್ಪನೆಯ ಜರ್ನಲಿಸಂ ಆಗಲೇ ಗರಿಗೆದರಿತ್ತು.

ವಿದ್ಯಾ ಸಮಾಚಾರ

ನನ್ನ ಪುಟಾಣಿ ಜರ್ನಲಿಸಂ ಕನಸಿಗೆ ಕವಿವಿ ದೊಡ್ಡ ಹರವು ಕೊಟ್ಟೀತೆಂಬ ನಿರೀಕ್ಷೆಯಿಂದಲೇ ಎಂಎ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಸೇರಿಕೊಂಡೆ. ಅಲ್ಲಿನ ಸಿಲಬಸ್ ನನಗೇನು ಅಂಥ ಭಾರಿ ಅನಿಸಲೇ ಇಲ್ಲ. ಮಾಸ್ ಮೀಡಿಯಾ, ಕಮ್ಯುನಿಕೇಷನ್ ವಿಷಯದ ಸಾರ ನನಗಂತೂ ಹೊಸದು ಅನ್ನಿಸಲೇ ಇಲ್ಲ. ಯಾಕೆಂದರೆ ಪ್ರ್ಯಾಕ್ಟಿಕಲ್ ರೂಪವನ್ನು ನಾನಾಗಲೇ ಅನುಭವಿಸಿಯಾಗಿತ್ತು. ಆದರೆ, ಥಿಯರಿಗೆ ಅದರದೇ ಆದ ಸ್ವರೂಪ ಇದ್ದೇ ಇರುತ್ತೆ. ಅದನ್ನು ತುಂಬ ಪ್ರೀತಿಯಿಂದಲೇ ಓದುತ್ತಿದ್ದೆ. ಕಮ್ಯುನಿಕೇಷನ್ ಥಿಯರಿ, ಜರ್ನಲಿಸಂ, ಕಮ್ಯುನಿಕೇಷನ್ ಮಾಡೆಲ್ಸ್, ಜಾಹಿರಾತು ತುಂಬ ಮೆಚ್ಚಿನ ವಿಷಯಗಳಾಗಿದ್ದು ಸಹಜವೇ ಆಗಿತ್ತು ನನ್ನ ಮಟ್ಟಿಗೆ. ಆದರೆ ವಿಭಾಗದ ಮುಖ್ಯಸ್ಥರಿಗೆ ಇಂಗ್ಲಿಷ್ ಮಾತನಾಡುವ ಮತ್ತು ಬರೆಯುವವರ ಬಗ್ಗೆ ಹೆಚ್ಚು ಒಲವಿತ್ತು. ನಾವೂ ಇಂಗ್ಲಿಷ್ ನಲ್ಲೇ ಪರೀಕ್ಷೆಗಳನ್ನು ಬರೆದವರು ಆ ಮಾತು ಬೇರೆ. ಇಂಗ್ಲಿಷ್ ನಲ್ಲಿ ಅವರು ಸಾಧಾರಣ ವಿಚಾರ ಹೇಳಿದರೂ ಅದು ಎಚ್ ಒ ಡಿ ದೃಷ್ಟಿಯಲ್ಲಿ ಗ್ರೇಟ್ ಅನಿಸುತ್ತಿತ್ತು. ಕನ್ನಡದಲ್ಲಿ ಸ್ವಲ್ಪ ಅರ್ಥಪೂರ್ಣ ಮಾತುಗಳನ್ನಾಡಿದರೆ ಹ್ಞೂ ಹ್ಞೂ ಪರವಾಗಿಲ್ಲ ಎನ್ನುವ ಎಂಥದೋ ಅಸಡ್ಡೆ ಇತ್ತು. ಅದು ಅವರ ಸೂಪಿರಿಯಾರಿಟಿ ಕಾಂಪ್ಲೆಕ್ಸೊ, ಮಿತಿಯೋ ನನಗಂತೂ ಕನಫ್ಯೂಸ್ ಆಗ್ತಿತ್ತು.

ವಿದ್ಯಾ ಸಮಾಚಾರ ದೊಡ್ಡ ತಲೆನೋವಿನ ಸಂಗತಿ ಎಂದು ಬಹುಜನ ಭಾವಿಸಿದ್ದರು. ನನಗೆ ಅದು ಅಂಥ ಮಹಾ ಅನ್ನಿಸಿರಲೇ ಇಲ್ಲ. ಆದರೆ, ಅದರ ಮುದ್ರಣದ ಕೆಲಸ ಮಾತ್ರ ತಲೆನೋವಿನದ್ದಾಗಿತ್ತು. ಅದು ವಿವಿ ವ್ಯವಸ್ಥೆ. ಮೀಡಿಯಾ ಸ್ಟಡೀಸ್ ದೃಷ್ಟಿಯಿಂದ ಅತ್ಯಂತ ಕೆಟ್ಟ ವ್ಯವಸ್ಥೆಯಾಗಿತ್ತು. ಆ ತಾಂತ್ರಿಕ ಕಾರಣಗಳಿಗಾಗಿ ನಾವೆಲ್ಲ ಎಚ್ ಒ ಡಿ ಕಡೆ ಉಗಿಸಿಕೊಳ್ಳಬೇಕಾಗುತ್ತಿತ್ತು. ಹಾಗೆ ನೋಡಿದರೆ ಇಂಥ ಕೆಟ್ಟ ವ್ಯವಸ್ಥೆ ಇಟ್ಟುಕೊಂಡಿದ್ದಕ್ಕೆ ನಾವೇ ಉಗೀಬೇಕಾಗಿತ್ತು. ಆ ವಿಷಯ ಬೇರೆ.

ವಿದ್ಯಾಸಮಾಚಾರದಲ್ಲಿ ಹೊಸ ಕಾಲಂ ಗಳ ಸಂಪ್ರದಾಯ ನಮ್ಮಿಂದಲೇ ಶುರುವಾಗಿತ್ತು. ರಂಗಭೂಮಿ, ಕಲೆ, ಸಾಹಿತ್ಯ... ಎಲ್ಲದರ ಬಗ್ಗೆ ವಿಮರ್ಶೆ ಅದರಲ್ಲಿ ಪ್ರಕಟಿಸುತ್ತಿದ್ದೆವು. ಕೆಲವು ಲೊಗೊ ನಾನೇ ಮಾಡಿದ್ದೆ. ನಮ್ಮ ಪಾಳಿ ಬಂದಾಗೆಲ್ಲ ಅವನ್ನು ಬಳಸಿಕೊಂಡಿದ್ದಿದೆ. ನಾನಾಗಲೇ ಧಾರವಾಡದ ರಂಗಭೂಮಿಯ ವಿಮರ್ಶೆಗಳನ್ನು ಬರೆಯುತ್ತಿದ್ದೆ. ಸಂಯುಕ್ತ ಕರ್ನಾಟಕ, ಕನ್ನಡಮ್ಮ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದುದರಿಂದ ಫೇಮಸ್ ಆಗಿದ್ದೆ. ಹಿಂದೂಸ್ತಾನಿ ಸಂಗೀತದ ಭಯಂಕರ ಹುಚ್ಚಿನಿಂದ ಆಗ ನಡೆಯುತ್ತಿದ್ದ ರೆಹಮತ್ ಸಂಗೀತ ಸಮಾರೋಹ, ರಾಜಗುರು, ಸವಾಯಿ ಗಂಧರ್ವ, ಕುಂದುಗೋಳ ಸಂಗೀತ ಸಮಾರೋಹಗಳಿಗೆಲ್ಲ ಅಹೋರಾತ್ರಿ ರಂಗಗೆಳೆಯರ ಜತೆ ಹಾಜರಾಗುತ್ತಿದ್ದೆ. ಕೆಲವು ಸಂಗೀತ ಸಮಾರಂಭಗಳ ರಿವ್ಯೂ ಕೂಡ ಬರೆದಿದ್ದೇನೆ.

ರಂಗದೀಪ್ತಿ ಪ್ರಶಸ್ತಿ ಮತ್ತು ನ್ಯಾಷನಲ್ ಲೇವಲ್ ಯೂತ್ ಫೆಸ್ಟಿವಲ್ ಗೆ ನನ್ನ ನಾಟಕ ತೋಬತೇಕ್ ಸಿಂಗ್

ರಂಗದೀಪ್ತಿ ಪ್ರಶಸ್ತಿ ನಮ್ಮ ವಿವಿಯ ಬಹುಪ್ರತಿಷ್ಠಿತ ಪ್ರಶಸ್ತಿ ಆಗಿಹೋಗಿತ್ತು. ಈ ಹಿಂದಿನ ಕೆಲ ಸ್ಪರ್ಧೆಯಲ್ಲಿ ಅದು ಮಿಸ್ ಆಗಿತ್ತು. ಒಂದು ಸಲ ಕೂದಲೆಳೆಯಲ್ಲಿ ಕಳಕೊಂಡಿದ್ದೆ. ಕೆಲ ಸಾಂಸ್ಕೃತಿಕ ರಾಜಕಾರಣ ನನ್ನ ನಾಟಕಕ್ಕೆ ಆ ಪ್ರಶಸ್ತಿಯನ್ನು ತಪ್ಪಿಸಿ ರನರ್ ಅಪ್ ಪ್ರಶಸ್ತಿಗೆ ಸೀಮಿತಗೊಳಿಸಿತ್ತು. ಮುಂದಿನ ವರ್ಷದಲ್ಲೇ ತೋಬತೇಕ್ ಸಿಂಗ್ (ಸಾದತ್ ಹಸನ್ ಮಾಂಟೊ ಅವರ ಸಣ್ಣ ಕಥೆ ಆಧರಿಸಿ ನಾನೇ ಸ್ಕ್ರಿಪ್ಟ್ ಬರೆದು, ನನ್ನದೇ ಅಂದಾಜಿನ ಸಂಗೀತ ಸಂಯೋಜಿಸಿ ಗೀತಾ ಮೆಂಡೀಗೇರಿ, ನೀತಾ ಕುಲಕರ್ಣಿ ಅವರ ಆಲಾಪಗಳನ್ನು ಬಳಸಿಕೊಂಡು ನಾಟಕವಾಗಿಸಿದ್ದೆ.) ನಾಟಕ ರಂಗದೀಪ್ತಿಯನ್ನು ಎತ್ತಿಹಿಡಿಯಿತು. ಹತ್ತಿರ ಸಾವಿರ ವಿದ್ಯಾರ್ಥಿಗಳು ಗಾಂಧೀಭವನದಂಥ ಕೆಟ್ಟ ಅಡಿಟೋರಿಯಂನಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಮೋಡ್ ನಲ್ಲಿ ಕುಳಿತು ವೀಕ್ಷಿಸಿದ್ದರು. ಅವರೆಲ್ಲ ಕಣ್ಣಾಲಿಗಳನ್ನು ಹಸಿಗೊಳಿಸಿಕೊಂಡಿದ್ದು ನನ್ನ ದಿಲ್ ನೊಳಕ್ಕೆ ನೆನಪಾಗಿ ಹಾಗೇ ಉಳಿದಿದೆ. ಆ ಕೊನೆಯ ಸೀನ್ ಗೆ ಬಿದ್ದ ಚಪ್ಪಾಳೆಗಳು, ಹೆಣ್ಣು, ಗಂಡು ಭೇದವಿಲ್ಲದೇ ತೊಟ್ಟಿಕ್ಕಿದ ಆ ಕಣ್ ಹನಿಗಳು ನನಗೆ ಈಗಲೂ ಅದೇ ಫ್ರೇಮನಲ್ಲಿ ಭದ್ರವಾಗಿ ಚಿತ್ತಭಿತ್ತಿಯಲ್ಲಿದೆ. ಸೌತ್ ಇಂಡಿಯಾ ಕಾಂಪಿಟಿಷನ್ ನಲ್ಲಿ ಎನ್ ಎಸ್ ಡಿ, ನೀನಾಸಂ ಹುಡುಗರೆಲ್ಲ ಮಾಡಿಸಿದ ನಾಟಕಗಳನ್ನು ಬದಿಗೊತ್ತಿ ನ್ಯಾಷನಲ್ ಲೇವಲ್ ಗೆ ಆಯ್ಕೆಯಾದ ನನ್ನ 'ತೋಬತೇಕ್ ಸಿಂಗ್' ಗೆ ಬಹುತೇಕ ವಿವಿ ಹುಡುಗರು, ಅವರ ತಂಡಗಳ ಮ್ಯಾನೇಜರ್ ಗಳೇ ಫ್ಯಾನ್ ಆಗಿದ್ದರು. ಮತ್ತು ಕಣ್ಣು ಹಸಿ ಮಾಡಿಕೊಂಡು ಬಂದು ನಮ್ಮೆಲ್ಲರ ಪರಿಚಯ ಮಾಡಿಕೊಂಡ ಅದೆಷ್ಟು ಹುಡುಗಿಯರು, ಮ್ಯಾಡಂಗಳನ್ನು ನೆನಪಿಸಿಕೊಳ್ಳಲಿ...! ಓಹ್ ಗಾಡ್. ಅದೊಂದು ಅವಿಸ್ಮರಣೀಯ ಕ್ಷಣ. ನಮ್ಮ ಹುಡುಗರೆಲ್ಲ ನನ್ನ ಎತ್ತಿಕೊಂಡು ಕುಣಿದಾಡಿದರು. ಮುತ್ತುಗಳ ಮಳೆಗರೆದರು. ನಮ್ಮ ಕ್ಯಾಂಪಸ್ ನಲ್ಲಿ ದೊಡ್ಡ ಮೆರವಣಿಗೆ. ಇಷ್ಟಲಿಂಗ ಸಿರ್ಸಿ, ಇಮ್ತಿಯಾಜ್, ಗರುಡ, ಸಂಜೂ ಮಾಲಗತ್ತಿ, ನೀಲಗುಂದ, ಹಿರೇಮಠ, ದೀಪ್ತಿ, ಸುಧಾಕರ್, ಪ್ರೀತಿ, ಜೋತ್ಸ್ನಾ, ಬಸಂತಿ ಇವರೆಲ್ಲ ಸಂಭ್ರಮಿಸಿದ ರೀತಿ ಅಬ್ಬಾ... ಆಸ್ಕರ್ ಪ್ರಶಸ್ತಿ ಸಿಕ್ಕಷ್ಟು ಸಂಭ್ರಮಪಟ್ಟಿದ್ದರು. ನ್ಯಾಷನಲ್ ಲೇವಲ್ ತಯಾರಿ ನಡೆಯುತ್ತಿದ್ದ ಸಂದರ್ಭ ಕುಲಪತಿ ಮತ್ತು ರೆಜಿಸ್ಟ್ರಾರ್ ಪೂರ್ವಭಾವಿ ಪ್ರದರ್ಶನದ ಆಸಕ್ತಿ ತೋರಿದರು. ತೋಬತೇಕ್ ಸಿಂಗ್ ಅವರೆಲ್ಲರ ಕಣ್ಣಾಲಿಗಳ ಹಸಿಗೊಳಿಸಿಬಿಟ್ಟ. ನಾವಿದ್ದ ಎರಡು ವರ್ಷದಲ್ಲಿ ಒಮ್ಮೆ ಮತ್ತು ಆ ನಂತರದ ವರ್ಷ ನಾನೇ ನಾಟಕ ನಿರ್ದೇಶಿಸಿದ್ದೆ. ಆ ಮೂರೂ ವರ್ಷ ನಮ್ಮ ವಿಭಾಗವೇ ಜನರಲ್ ಚಾಂಪಿಯನ್! (ನಾನು ಎಂಎಸ್ಸಿ ಓದುವಾಗಲೂ ಜನರಲ್ ಚಾಂಪಿಯನ್ ಆಗಿದ್ದೆವು.)

ಮೊದಲ ವರ್ಷ ಜನರಲ್ ಚಾಂಪಿಯನ್ ಆಗಿದ್ದಾಗ ಬೃಹತ್ ಗಾತ್ರದ ಪಾರಿತೋಷಕ ಎತ್ತಿಕೊಂಡು ವಿಭಾಗಕ್ಕೆ ಹೋದೆವು. ನಾನು ಮೊದಲೇ ಹೇಳಿದ್ದೆ ಎಚ್ ಒ ಡಿ ಗೆ ಮಾಧ್ಯಮ ಅಂದರೆ ವರದಿ, ಲೇಖನ, ಅದೇ ಭಾಷೆ, ಕಾಗುಣಿತ ಅಷ್ಟೇ ಕಣೋ... ಇದೆಲ್ಲ ಅವರ ತಲೆಗೆ ಹೋಗಲ್ಲ ಎಂದೆ ನಮ್ಮ ಹುಡುಗರಿಗೆ. ಕೇಳಲಿಲ್ಲ. ಸಯೀದ್ ಸನದಿ, ನೌಶಾದ್, ಶಿವಕುಮಾರ್... ಎಲ್ಲರೂ ಚೇಂಬರ್ ಹೊಕ್ಕರು. ಎಚ್ ಒ ಡಿ ಏನು ಹೇಳಿದರು ಗೊತ್ತಾ... ಆಯ್ತರಯ್ಯಾ ಟ್ರೋಫಿ ಅಲ್ಲೇ ಎಲ್ಲಾದರೂ ಜಾಗ ಸಿಕ್ಕರೆ ಇಡಿ, ವಿದ್ಯಾ ಸಮಾಚಾರ ಎಲ್ಲಿಗೆ ಬಂತ್ರಯ್ಯ ಎಂದೆಲ್ಲ ಉಗಿದು ಕಳುಹಿಸಿದ್ರು. ನಾನು ಹೊರಗೆ ಮುಸಿ ಮುಸಿ ನಗುತ್ತಾ ನಿಂತಿದ್ದೆ ಇದನ್ನೆಲ್ಲ ಮೊದಲೇ ಗ್ರಹಿಸಿದ್ದೆ...

ತೋಬತೇಕ ಸಿಂಗ್ ನಾಟಕ ನ್ಯಾಷನಲ್ ಲೇವಲ್ಗೆ ಸೆಲೆಕ್ಟ್ ಆದಾಗಲೇ ಎಚ್ ಒ ಡಿ ಗೆ ಮಾಧ್ಯಮದ ವಿಸ್ತಾರದಲ್ಲಿ ಪತ್ರಿಕೋದ್ಯಮ ಒಂದು ಪ್ರಕಾರವಷ್ಟೇ ಮತ್ತು ಅದಷ್ಟೇ ಮಾಧ್ಯಮ ಹರವು ಅಲ್ಲ ಅಂತ ಗೊತ್ತಾಗಿರಬೇಕು. ನಮ್ಮ ಹುಡುಗರಿಗೆ ಟ್ರೀಟ್ ಕೊಟ್ರು. ಹೆಮ್ಮೆಯಿಂದ ಹೇಳಿಕೊಂಡರು.

ನ್ಯೂಸ್ ಪೇಪರ್, ಮ್ಯಾಗಜೀನ್ ಆಗಲಿ ಅಥವಾ ಸಿನಿಮಾ, ಥಿಯೇಟರ್ ಆಗಲಿ... ಹೇಳುವ ವಿಷಯ ಮತ್ತು ಅದನ್ನು ಮುಟ್ಟಿಸುವ ವಿಧಾನ ಮುಖ್ಯ. ಅದಕ್ಕೆ ಬೇಕಾದ ಸೆನ್ಸಿಬಿಲಿಟಿ, ಸೆನ್ಸಿಟಿವಿಟಿ, ಕ್ರಿಯೇಟಿವಿಟಿ, ಆಳವಾದ ಜ್ಞಾನ ಮುಖ್ಯ. ಭಾಷೆ, ಬೊಗಳೆ, ಸಾಹಿತ್ಯ ಮುಖ್ಯವಲ್ಲ. ಲೇಖನಗಳನ್ನು ಒಬ್ಬ ಪೋಸ್ಟ್ ಮ್ಯಾನ್, ಬೀಡಾ ಅಂಗಡಿಯವ ಕೂಡ ಬರೆಯಬಲ್ಲ. ಬರೆಯುವುದನ್ನು ಕಲಿತ, ಯೋಚಿಸುವ ತಲೆ ಇದ್ದ ಎಲ್ಲರೂ ಬರೆಯಬಲ್ಲ ಒಂದು ಬರವಣಿಗೆಯ ಪ್ರಕಾರ ಅಷ್ಟೇ. ಅಲ್ಲಿ ಭಾಷೆ, ಕಾಗುಣಿತ, ಮಣ್ಣು ಮಸಿ ಎಲ್ಲ ಮುಖ್ಯವಲ್ಲ. ಅದರ ವಿಚಾರ ಮುಖ್ಯ. ಬರವಣಿಗೆಯೇ ಜರ್ನಲಿಸಂ ಎಂದು ಯಾವ ಮುಠ್ಠಾಳ ಹೇಳಿದ್ದಾನೋ...! ಇಷ್ಟು ಸಾಮಾನ್ಯ ಜ್ಞಾನ ಇರದವರೂ ಈ ಮಾಧ್ಯಮ ದುನಿಯಾದಲ್ಲಿದ್ದಾರೆ. ಇಂದು ಪತ್ರಿಕಾಜಗತ್ತು ಅಂದರೆ ವಿಫಲ ಸಾಹಿತಿಗಳ ಪುನರ್ವಸತಿ ಕೇಂದ್ರಗಳಾಗುತ್ತಿವೆ ಅನಿಸುತ್ತಿದೆ. ಪರಿಕಲ್ಪನೆಗಳಿಗಿಂತ ಬರೆವಣಿಗೆಯ ಸಿದ್ಧಮಾದರಿ, ಪರಿಕರಗಳು, ವ್ಯಾಕರಣ ಮುಖ್ಯವಾಗುತ್ತಿದೆ. ಲಿಟರರಿ ಸೆನ್ಸಿಬಿಲಿಟಿ ಸೋಗಿನಿಂದ, ಶಬ್ದ ಸೊಕ್ಕಿನಿಂದ ಮುದ್ರಣ ಮಾಧ್ಯಮ ಹೊರಬರಬೇಕು ಎನ್ನುವುದು ನನ್ನ ಆಶಯ, ಕಾಳಜಿ.

ತೋಬತೇಕ ಸಿಂಗ್ ನಾಟಕದ ನ್ಯಾಷನಲ್ ಲೇವಲ್ ಕಾಂಪಿಟಿಷನ್ ತಯಾರಿ ಹೊತ್ತಲ್ಲೇ ನನಗೆ ಕೆಲಸ ಸಿಕ್ಕಿದ್ದು. ಅಲ್ಲಿಯತನಕ ನನ್ನ ಮನಸು ತುಂಬ ಮುಂಬೈ ಬಾಲಿವುಡ್, ನವದೆಹಲಿಯ ಎನ್ ಎಸ್ ಡಿ ಕನಸುಗಳದ್ದೇ ದರ್ಬಾರು ನಡೀತಿತ್ತು. ಬೆಂಗಳೂರಿಗೆ ಹೊರಡುವಷ್ಟು ದುಡ್ಡು ಕೂಡ ನನ್ನಲ್ಲಿರಲಿಲ್ಲ. ಮುಂಬೈ ನ್ಯಾಷನಲ್ ಯೂತ್ ಫೆಸ್ಟಿವಲ್ ಗೆ ಕೆಲವೇ ದಿನ ಬಾಕಿ ಇರುವಾಗ ನನಗೆ ಕೆಲಸ ಸಿಕ್ಕ ಬಗ್ಗೆ ಹುಡುಗರಿಗೆ ತಿಳಿದಿದ್ದು. ಅವರೆಲ್ಲ ಸೇರಿ ನನಗೊಂದು ಲಕೋಟೆ ನೀಡಿದರು. ಸರ್ ಇದನ್ನು ಬಸ್ ಹತ್ತಿದ ಮೇಲೆ ತೆಗೆದು ನೋಡಬೇಕೆಂದು ಕಂಡೀಷನ್ ಹಾಕಿದ್ದರು. ಅಂತೂ ನಾನು ಬೆಂಗಳೂರಿಗೆ ಬಸ್ ಹತ್ತಿದೆ. ನನ್ನ ಕಳುಹಿಸಲು ಇಡೀ ತಂಡವೇ ಬಂದಿತ್ತು. ಕನಿಷ್ಠ 40 ವಿದ್ಯಾರ್ಥಿಗಳು ಬಸ್ ನತ್ತ ಕೈಬೀಸಿದ್ದನ್ನು ಹೇಗೆ ಮರೆಯಲಿ... ಲಕೋಟೆ ತೆರೆದು ನೋಡಿದರೆ ನನ್ನ ಖರ್ಚಿಗೆ ಸಾಕಾಗುವಷ್ಟು ದುಡ್ಡಿತ್ತು!

ಮರೆಯಲಾಗದ ಕ್ಷಣಗಳು ಮತ್ತಷ್ಟು...

ಇಂಟರ್ನಶಿಪ್ ಮಾಡಿದ್ದು ಉದಯವಾಣಿಯಲ್ಲಿ. ಆಗ ಭಟ್ಟರೊಬ್ಬರು ಅದರ ಸಂಪಾದಕರಾಗಿದ್ದರು. ನನ್ನೊಂದಿಗೆ ಇನ್ನೂ ಇಬ್ಬರು ಜೂನಿಯರ್ಸ್ ಕೂಡ ಇಂಟರ್ನಶಿಪ್ ಗಾಗಿ ಸೇರಿಕೊಂಡಿದ್ದರು. ನಾನಾಗ ಮಾಡಿದ ಕೆಲಸ ಅಬ್ಬಾ! ಯಾವ ಸೀನಿಯರ್ ಕೂಡ ಅಷ್ಟು ಮಾಡಿರಲಿಕ್ಕಿಲ್ಲ. ವರದಿಗೆ ಸಂಬಂಧಿಸಿದಂತೆ ಜನರಲ್, ವಿಧಾನಮಂಡಲ ಕಲಾಪ, ಕ್ರೈಂ ಮತ್ತು ರಂಗಭೂಮಿ, ನೃತ್ಯ, ಯಕ್ಷಗಾನ ರಿವ್ಯೂ, ಸಿನಿಮಾ ಬಗ್ಗೆ, ಇನ್ನಿತರ ಹಲವಾರು ಲೇಖನಗಳನ್ನು, ವರದಿಗಳನ್ನು ಇಂಡಿಪೆಂಡೆಂಟ್ ಆಗೇ ಬರೆದೆ. ಪತ್ರಿಕೆ ವಿನ್ಯಾಸದಲ್ಲೂ ಗಮನಹರಿಸಿದೆ. ಎಷ್ಟರಮಟ್ಟಿಗೆ ಪ್ರಭಾವ ಬೀರಿದ್ದೆನೆಂದರೆ ಇಂಟರ್ನಶಿಪ್ ಮುಗಿದ ಮೇಲೆ ಭಟ್ಟರು ಊರಿಗೆ ಹೋಗದಂತೆ ತಾಕೀತು ಮಾಡಿದರು. ಸದ್ಯ ಕೆಲಸಕ್ಕೆ ಸೇರಿಸಿಕೊಳ್ಳುತ್ತೇನೆ. ಇಲ್ಲೇ ಇನ್ನಷ್ಟು ದಿನ ಟ್ರೈಲ್ ಬೇಸ್ ಮೇಲೆ ಕೆಲಸ ಮಾಡಿ, ನಂತರ ಖಾಯಂ ಮಾಡ್ತೀನಿ ಎಂದರು. ಕೆಲವು ಕಂತ್ರಿ ಭಟ್ಟರು ನನ್ನ ವಿರುದ್ಧ ಕತ್ತಿ ಮಸೆದರು. ಸಾಲದ್ದಕ್ಕೆ ಅಲ್ಲಿನ ಗುರಾಯಿಸುವ ಆಂಟಿ ಕೂಡ ಭಟ್ಟರ ತಲೆಗೆ ಏನನ್ನೋ ರವಾನಿಸಿದ್ದಳು ಅನಿಸುತ್ತದೆ. ಅದೇ ಟೈಮಿಗೆ ಅದಾವುದೊ ಪುಟಗೋಸಿ ಭರತನಾಟ್ಯ ಡಾನ್ಸರ್ ಒಬ್ಬಳು ತನ್ನ ಪ್ರೊಫೈಲ್ ಗಾಗಿ ನನ್ನ ಭೇಟಿ ಮಾಡಿದ್ದು ಮತ್ತು ಆಕೆಯ ಸುಂದರ ದನಿಯ ಫೋನುಗಳ ರಿಂಗಣವೇ ದೊಡ್ಡದಾಯಿತು ಆ ಸಂಪಾದಕರಿಗೆ! ಹಾಗೆ ಗಾಸಿಪ್ ಮಾಡಿದ್ದಳೇನೋ ಆ ಆಂಟೀ... ನೀನಿಷ್ಟು ಫೇಮಸ್ ಆಗಿಬಿಟ್ಟಿದಿಯಾ... ಕರಾವಳಿ ಸುಂದರಿಯರ ತಲೆ ಕೆಡಿಸುವಷ್ಟು ಫೇಮಸ್ ಫಿಗರ್ ಆಗಬಹುದು ನೀನು... ಅಂದುಕೊಂಡರೇನೋ! ಹಾ, ಹೂ... ಎಂದೆಲ್ಲ ರೇಗಿಬಿಟ್ಟರು. ನಾನಾಗಲೇ ಡಿಸೈಡ್ ಮಾಡಿಬಿಟ್ಟೆ. ಬೇರೆ ಏನಾದರೂ ಮಾಡುವಾ, ಜಾಬ್ ಮಡೋದೇ ಆದರೆ ನಾನು ಇದೇ ಬೆಂಗಳೂರಿನಲ್ಲಿ ಜಾಬ್ ಮಾಡ್ತಿನಿ. ಇದೆಲ್ಲಕ್ಕೂ ತಲೆಕೆಡಿಸಿಕೊಳ್ಳಲ್ಲ... ಆದರೆ ನನ್ನ ತಾಯಾಣೆ ಯಾವ ಅಂಥ ಚಿಲ್ಲರೆ ಕನಸುಗಳು ನನ್ನೊಳಕ್ಕಿರಲಿಲ್ಲ. ಈಗಲೂ ಅಷ್ಟೇ. ನನಗಿರೋದೊಂದೇ ಕನಸು ಈ ಬದುಕು ಸಾರ್ಥಕ ಎನಿಸುವಂಥ ಕೆಲಸ ಮಾಡಬೇಕು ಅನ್ನೋದು ಎಂದು ಹೇಳಿ ಮತ್ತೆ ದೂಸರಾ ಮಾತಾಡದೇ ಹೊರಕ್ಕೆ ಬಂದೆ. ಜೋರು ಮಳ ಸುರೀತಿತ್ತು. ಮಳೆಯಲ್ಲಿ ನಡಕೊಂಡೇ ಶಿವಾಜಿನಗರ ಬಸ್ ಸ್ಟಾಪ್ ಗೆ ಬಂದೆ. ಮತ್ತೆ ನಾನೆಂದೂ ಆ ಕಡೆ ತಲೆ ಹಾಕಲಿಲ್ಲ.

ಆದರೆ ಇಂಟರ್ನಶಿಪ್ ಮುಗಿದ ದಿನ ಕೊಟ್ಟ ಪತ್ರ ಮಾತ್ರ ಅದ್ಭುತವಾಗಿತ್ತು. ಈ ಹುಡುಗ ಆಗಲೇ ಪರಿಪೂರ್ಣ ಪತ್ರಕರ್ತ ಆಗಿದ್ದಾನೆ, ಸೊಗಸಾಗಿ ಬರೀತಾನೆ, ವಿನ್ಯಾಸವನ್ನೂ ಮಾಡ್ತಾನೆ ಎಂದೆಲ್ಲ ವಿಶೇಷವಾಗಿ ಹೊಗಳಿದ್ದರು. ಆದರೆ ಮಾರ್ಕು ಮಾತ್ರ ಹುಡುಗಿಯರಿಗಿಂತ ಕಮ್ಮಿ ಕೊಟ್ಟಿದ್ದರು!

ಒಂದು ದಿನ ವಿಭಾಗದ ಎಚ್ ಒ ಡಿ ಗೆ ಲೆಟರ್ ಕೊಟ್ಟು, ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳೋಣ ಅಂತ ಹೋದೆ. ಎಚ್ ಒ ಡಿ ಕೇಳಿದರು. ಏನಪ್ಪಾ ನಿನ್ನ ಹೆಸರು? ಅಪ್ಲಿಕೇಶನ್ ಬೇಕಿತ್ತಾ? ಅಂದರು. ಇಲ್ಲಾ ನಾನು ಆಗಲೇ ಇಲ್ಲೇ ಎಂಎ ಕೋರ್ಸ್ ಮುಗಿಸಿದೆ. ಮಾರ್ಕ್ಸ್ ಕಾರ್ಡ್ ಬೇಕಿತ್ತು ಅದಕ್ಕೆ ಬಂದೆ ಎಂದೆ. ಓಹ್, ಏನು ಹೆಸರು ನಿಮ್ಮದು? ಯಾವ ಬ್ಯಾಚ್? ಎಂದರು. ಸಾವಿರಾರು (ನಾವಿದ್ದದ್ದೇ 13 ಜನ ವಿದ್ಯಾರ್ಥಿಗಳು)! ವಿದ್ಯಾರ್ಥಿಗಳಲ್ಲಿ ನನ್ನನ್ನೆಲ್ಲಿ ನೆನಪಿಟ್ಟಿರಬೇಕು ಪಾಪ... ಎಂದುಕೊಂಡು ಒಂದು ಬಿಳಿ ಹಾಳೆಯ ಮೇಲೆ ನನ್ನ ಪೂರ್ತಿ ಹೆಸರು, ಬ್ಯಾಚ್ ವಿವರ, ಇಸವಿ ಎಲ್ಲ ಬರೆದು ಟೇಬಲ್ಲಿಗಿಟ್ಟೆ.

ಮೂರೇ ತಿಂಗಳಲ್ಲಿ ನನ್ನ ಕೆಲಸ ಮೆಚ್ಚಿ, ಇಡೀ ಕಚೇರಿಯ ಸಿಬ್ಬಂದಿ ಮುಂದೆ ನನ್ನ ಹೊಗಳಿ ಇದ್ದರೆ ಇರಬೇಕು ಇಂಥ ಟ್ಯಾಲೆಂಟ್ ಎಂದೆಲ್ಲ ಹೊಗಳಿ ಕೆಲಸಕ್ಕೆ ನೀನಿಲ್ಲೇ ಸೇರಿಕೋಬೇಕು ಎಂದೆಲ್ಲ ಮಾತಾಡಿ ಮತ್ತೆ ಜುಜುಬಿ ಹುಡುಗಿಯೊಬ್ಬಳ ಫೋನ್ ಕಾಲ್ ಗೆ ಗರಂ ಆಗಿ ನನ್ನ ಮೇಲೆ ರೇಗಾಡಿ ಅಷ್ಟರೊಳಗೆ ಅತಿಯಾಗಿ ಗುರುತಿಸಿದ ಈ ಸಂಪಾದಕರೆಲ್ಲಿ? ಎರಡು ವರ್ಷ ನಮಗೆ ಕಲಿಸಿ ಅದೂ ಕಮ್ಯುನಿಕೇಷನ್, ಜರ್ನಲಿಸಂ ಹೇಳಿಕೊಟ್ಟು, ಬೀಳ್ಕೊಡುವ ಸಮಾರಂಭದಲ್ಲಿ ವಿಶೇಷವಾಗಿ ನನ್ನ ಹೆಸರನ್ನೂ ಪ್ರಸ್ತಾಪಿಸಿ ಇಂಥ ಹೆಮ್ಮೆಯ ವಿದ್ಯಾರ್ಥಿಗಳು ನಮ್ಮ ವಿಭಾಗದಲ್ಲಿದ್ದುದು ಖುಷಿ ಕೊಟ್ಟಿತು ಎಂದೆಲ್ಲ ಹೇಳಿದ ಎಚ್ ಒ ಡಿ ಕಡೆಗೆ ಗುರುತೇ ಹಿಡಿಯದಷ್ಟು ನಾನು ಬದಲಾಗಿಬಿಟ್ಟಿದ್ದೆನಾ? ಎನಿಸಿತು. ಈ ಪರಿಯ ಕಮ್ಯುನಿಕೇಷನ್ ನ ದೊಡ್ಡ ಪಾಠ ನನ್ನ ಬುತ್ತಿಯೊಳಗಿಟ್ಟ ವಿಷದಂತಿದೆ.

ಇದಕ್ಕೂ ದೊಡ್ಡ ವಿಷದ ವಿಷಯವೆಂದರೆ ತಾರತಮ್ಯ!

ನನಗೆ ಗೊತ್ತಿದ್ದ ಹಾಗೆ ಒಂದೆರಡು ಬ್ಯಾಚ್ ಗಳಲ್ಲಿ ಗೋಲ್ಡ್ ಮೆಡಲ್ ನೀಡುವುದಕ್ಕೆ ಸಂಬಂಧಿಸಿದಂತೆ ಘೋರ ಅನ್ಯಾಯವೇ ನಡೆದಿದೆ ಎನ್ನುವ ಅನುಮಾನ. ಒಬ್ಬ ವಿದ್ಯಾರ್ಥಿ ಫೈನಲ್ ಈಯರ್ ನಲ್ಲಿ ಕ್ಯಾಂಪಸ್ ಗೆ, ಕ್ಲಾಸಿಗೆ ಬಂದಿದ್ದು ಅಪರೂಪ. ಫೈನಲ್ ಈಯರ್ ಓದು ಆರಂಭಗೊಂಡ ಸ್ವಲ್ಪ ದಿನಗಳಲ್ಲೇ ಆತನಿಗೆ ದೂರದ ಬೆಂಗಳೂರಿನ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತ್ತು. ಪರೀಕ್ಷೆಗೆ ಸುಲಭವಾಗೇ ಕುಳಿತ. ಆದರೆ ಒಂದೆರಡಷ್ಟೇ ಅಟೆಂಡೆನ್ಸ್ ಶಾರ್ಟ್ ಇದ್ದವರು ಅದೆಷ್ಟು ಉಗಿಸಿಕೊಂಡರು. ಆ ಹುಡುಗನಿಗೆ ಪರೀಕ್ಷೆ ಬರೆದದ್ದಷ್ಟೇ ಅಲ್ಲ ಮೆಡಲ್ ಗಳು ಕೂಡ ಅವನ ಕೊರಳು ಅಲಂಕರಿಸಿದವು! ಆತನ ಹಿಂದೆ ಕ್ಲೋಸ್ ರೇಸ್ ನಲ್ಲಿದ್ದ ಮತ್ತು ಮೊದಲ ವರ್ಷದಲ್ಲೇ ಸ್ವಲ್ಪ ಮುನ್ನಡೆ ಹೊಂದಿದ್ದ ಕುರುಬರ ಹುಡುಗನಿಗೇಕೆ ಅದು ಒಲಿಯಲಿಲ್ಲ? ಆತನಿಗೆ ನ್ಯಾಯವಾಗಿ ದಕ್ಕಬೇಕಿದ್ದ ಮೆಡಲ್ ಕೆಲವೇ ಮಾರ್ಕುಗಳಲ್ಲಿ ತಪ್ಪಿತು. ಯಾವ ಘನಂದಾರಿ ಸಾಧನೆ ಮಾಡಿತು ಶಿಕ್ಷಣ ವ್ಯವಸ್ಥೆ? (ಇದೆಲ್ಲ ನನ್ನ ಅಸಮಧಾನ, ಭಾವನೆಗಳು ಅಷ್ಟೇ. ಆರೋಪವಲ್ಲ)

ನಮ್ಮ ಬ್ಯಾಚ್ ವಿಷಯದಲ್ಲೂ ಇಷ್ಟೇ ಆಗಿದ್ದು. ಅದಾವುದೋ ಕೀನ್ಯಾ ಹುಡುಗನಿಗೆ ಮೆಡಲ್. ಆತ ಕ್ಲಾಸಿಗೇ ಬರಲಿಲ್ಲ ನೆಟ್ಟಗೆ. ಆತ ವಿದ್ಯಾಸಮಾಚಾರ ಕೆಲಸವನ್ನಾಗಲಿ, ಡಿಸರ್ಟೇಷನ್ ಆಗಲಿ ಸೀರಿಯಸ್ ಆಗಿ ಮಾಡಿದನೋ ಅಥವಾ ಯಾರದೋ ಕೃಪೆಯಿಂದ ಅವನ್ನೆಲ್ಲ ನಿಭಾಯಿಸಿದ್ದನೊ ಗೊತ್ತಿಲ್ಲ.. ಆತನ ಹಿಂದೆ ರೇಸ್ ನಲ್ಲಿ ಬ್ರಾಹ್ಮಣರ ಹುಡುಗನ (ಆತ ಕೆಲವು ಇಂಟರ್ನಲ್ ಎಕ್ಸಾಮ್ ಅಥವಾ ಕಡ್ಡಾಯ ಟೆಸ್ಟ್ ತಪ್ಪಿಸಿಕೊಂಡು ಹಿಂದೆ ಬಿದ್ದಿದ್ದ.) ಜತೆ ನಾವು ಕೆಲವು ಮುಸಲ್ಮಾನ ಹುಡುಗರಿದ್ದೆವು.!..

ಸ್ಟಡಿ ಟೂರಿಗೆ ಹೋಗಿದ್ದೆವು. ನಮ್ಮ ಜತೆ ಬಂದ ಶಿಕ್ಷಕ ಮಹಾಶಯರು ಚೆಲ್ಲಾಟಕ್ಕೆ ಹರಿಸಿದಷ್ಟು ಗಮನ ಬೇರೆ ವಿಷಯದಲ್ಲಿ ವಹಿಸಲೇ ಇಲ್ಲ. ಅವರೊಂದಿಗೆ ನಮ್ಮ ಕೆಲ ಕೋತಿ ವಿದ್ಯಾರ್ಥಿಗಳು ಸೇರಿಕೊಂಡಿದ್ದರು. ಇವರೆಲ್ಲ ಚಟ ಬಿಟ್ಟು ಬೇರೆನನ್ನೂ ಟೂರ್ ನಲ್ಲಿ ಮಾಡಿಲ್ಲ. ನಾನು ಮತ್ತು ಕೆಲವರು ತುಂಬ ಸೀರಿಯಸ್ ಆಗಿ ತೊಡಗಿಕೊಂಡಿದ್ದೆವು. ನನ್ನ ಟೂರ್ ರಿಪೋರ್ಟ್ ಜಬರ್ದಸ್ತ್ ಆಗಿತ್ತು. ಸ್ವತಃ ಈ ಶಿಕ್ಷಕರೇ ಕ್ಯಾಂಪಸ್ ನ ಒಂದು ರಸ್ತೆಯಲ್ಲಿ ಕಾರು ನಿಲ್ಲಿಸಿ ನನ್ನ ರಿಪೋರ್ಟ್ ಬಗ್ಗೆ ತುಂಬ ಹೇಳಿದ್ದರು ಮೆಚ್ಚಿಕೊಂಡಿದ್ದರು. ಅದ್ಭುತ ಎಂದಿದ್ದರು. ಕೆಲವರಂತೂ ನೆಪಮಾತ್ರದ ವರದಿ ನೀಡಿ, ಇವರೊಂದಿಗೆ ಇಡೀ ಟೂರ್ ತುಂಬ ಹರಟಿದ್ದರು. ಆದರೆ ವರದಿಗೆ ಮಾರ್ಕು ಮಾತ್ರ ನನಗೆ ಕಮ್ಮಿ ಬಂದಿತ್ತು.

ನಮ್ಮ ಬಗ್ಗೆ ಮುಂಚೆ ಕೋಪ ಇಟ್ಟುಕೊಂಡಿದ್ದ ಮತ್ತು ಫೈನಲ್ ಬಂದಾಗ ಆತ್ಮೀಯರಾಗಿದ್ದ ಒಬ್ಬ ಪ್ರೊಫೆಸರ್ ಮಾತ್ರ ಪ್ರೀತಿ ತೋರಿದ್ದು. ಅಕ್ಕರೆಯಿಂದ ಕಂಡಿದ್ದು. ಒಳ್ಳೆಯ ಕೆಲಸಕ್ಕೆ ಷಹಬ್ಬಾಸ್ ಎಂದು ಬೆನ್ನು ತಟ್ಟಿದ್ದು.

ಅಲುಮ್ನಿ ಮೀಟ್ ನೆವದಲ್ಲಿ ಇಷ್ಟೆಲ್ಲ ನೆನಪುಗಳು ಬಿಚ್ಚಿಕೊಂಡವು. ಗೆಳೆಯರು , ಜತೆಯಲ್ಲಿ ಓದಿದವರೊಂದಿಗೆ ನೆನಪು ಹಂಚಿಕೊಳ್ಳಲು ಅಲುಮ್ನಿ ಮೀಟ್ ಒಳ್ಳೆಯ ನೆವ. ಆದರೆ, ಕೆಲವರಿಗೆಂದೇ ಸೃಷ್ಟಿಯಾದಂತಿರುವ, ಕೆಲವರ ಜ್ಞಾನವನ್ನೇ ಶ್ರೇಷ್ಠವೆಂದು ಭಾವಿಸಿದಂತಿರುವ, ಅವರಿಗೇ ಮನ್ನಣೆ, ಗೌರವ ನೀಡುವ, ಅವರಿಗೆಂದೇ ಗೋಲ್ಡ್ ಮೆಡಲ್ ಗಳನ್ನು ರೂಪಿಸಿಟ್ಟುಕೊಂಡಂತಿರುವ, ಅವರಿಗೇ ಹೇಗಾದರೂ ಅವನ್ನು ತಲುಪಿಸುವ, ಅಥವಾ ತಮಗಿಷ್ಟವಾದವರ ಕೊರಳಿಗೇ ಅದು ಬೀಳುವಂತೆ ಮಾಡುವ, ಇನ್ನು ಕೆಲವರಿಗಂತೂ ಅದರ ಕನಸೂ ಕಾಣದಂತಾಗಿಸುವ, ಅಥವಾ ಅದನ್ನು ಅಸಾಧ್ಯವಾಗಿಸುವ ಮನೋಧರ್ಮದ ಮತ್ತು ಕೆಲವರ ಮೇಲೆ ಅನಗತ್ಯ ಕನಿಕರ, ಮೆಹರ್ಬಾನಗಿ ತೋರುವಂಥ ವರ್ತನೆ ಹೊಂದಿರುವಂತಿದೆ ಎನಿಸುವ ಶಿಕ್ಷಣ ವ್ಯವಸ್ಥೆ ಮತ್ತು ಅದರ ನಿರ್ವಹಣೆಯಲ್ಲಿ ತೊಡಗಿದವರ ಗುರುತಿಸುವಲ್ಲಿನ ಅಸಡ್ಡೆ, ಉಡಾಫೆ, ತರತಮ ನೀತಿ ನನ್ನೊಳಗೊಂದು ತಿರಸ್ಕಾರದ ಭಾವನೆ ಮೂಡಿಸಿದೆ. ದೊಡ್ಡ ನೋವು ಅದು. ಹೀಗಾಗಿ ನಾನು ಮೀಟ್ ನಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ಆದರೆ ಕೆಲ ಗೆಳೆಯರ ಒಡನಾಟದ ನೆನಪು, ಜತೆಯಲ್ಲಿ ಓದಿದ ಹೆಮ್ಮೆಯ ಮುಂದೆ ನನ್ನ ಮುನಿಸದೆಂಥದು... ಮೀಟ್ ಗೆ ಬರಲಾಗಿದ್ದಕ್ಕೆ ಕ್ಷಮೆ ಇರಲಿ. ನೆನಪಿರಲಿ ನಿಮಗೆಲ್ಲಾ: ಕೆಚ್ಚೆದೆ, ಪ್ರತಿಭಟನಾ ಮನೋಧರ್ಮ, ನೈತಿಕತೆ, ಧೈರ್ಯ ಇರಲಿ. ಜರ್ನಲಿಸಂ ಗೆ ಅದು ಬೇಕು. ಪಿಆರ್ ಥರ ಬರಿಯ ಡಿಪ್ಲೊಮ್ಯಾಟಿಕ್ ಮನೋಧರ್ಮ ಅಲ್ಲ.

ಶಾಲ್ಮಲೆಯಲ್ಲಿ ಬಹುಶಃ ಹೊಸ ನೀರು ಹರಿದಿರಬಹುದು... ಕೊಂಚ ಎಲ್ಲದರಲ್ಲಿ ಸುಧಾರಣೆ ಬಂದಿರಲೂಬಹುದು. ನ್ಯಾಯಯುತವಾದ ಮನ್ನಣೆ ಅರ್ಹರಿಗೇ ದಕ್ಕಿದ್ದಲ್ಲಿ ಅವರಿಗೆ ನನ್ನ ದಿಲ್ ಪೂರ್ವಕ ಶುಭಾಶಯಗಳು.

'ಫಲಾನುಭವಿ'ಗಳನ್ನು ಹೊರತುಪಡಿಸಿ, ಹಾಗೇ ವಿಶಾಲ ಮನೋಧರ್ಮ, ಯಾವುದೋ ಭಾವುಕತೆ, ಭ್ರಮೆಯನ್ನೇ ಪ್ರಧಾನ ಎಂದುಕೊಂಡು ಮೀಟ್ ನಲ್ಲಿ ಪಾಲ್ಗೊಂಡ ಮುಗ್ಧ ಅಲುಮ್ನಿಗಳಿಗೆ, ಗೆಳೆಯರಿಗೆ ನನ್ನ ನಮನಗಳು.

ಶುಕ್ರವಾರ, ಜನವರಿ 8, 2010

ಪೇಡ್ ನ್ಯೂಸ್ ಗಿಂತ ಮಾನಸಿಕ, ಸಾಮಾಜಿಕ ಭ್ರಷ್ಟತೆ ಅಪಾಯಕಾರಿ!

ಮೀಡಿಯಾ ಅಂದಾಕ್ಷಣ ನಮಗೆ ತಟ್ಟನೆ ಸುದ್ದಿ ಪತ್ರಿಕೆಗಳು, ಟಿವಿ ಚಾನೆಲ್ ಗಳು ಮಾತ್ರ ನೆನಪಾಗಿಬಿಡುತ್ತವೆ. ಆದರೆ, ಮೀಡಿಯಾದ ಹರವು ಇಷ್ಟೇ ಅಲ್ಲ. ಇವು ಇದರ ಭಾಗಗಳಷ್ಟೇ. ನಾಟಕ, ಚಿತ್ರಕಲೆ, ಸಂವಹನ ಕಲೆ ಇವೆಲ್ಲವೂ ಮಾಧ್ಯಮದ ಭಾಗಗಳೇ. ಸಾಹಿತ್ಯ ಕೂಡ ಒಂದು ಮೀಡಿಯಂ. ಹಾಗೇ ಟಿವಿ ಸೀರಿಯಲ್, ಸಿನಿಮಾ, ಡಾಕ್ಯುಮೆಂಟರಿ, ಶಾರ್ಟ್ ಫಿಲಂ, ಪೇಂಟಿಂಗ್, ಸಂಗೀತ...

ಮೀಡಿಯಾ ಅಂದಾಕ್ಷಣ ಪತ್ರಿಕೆಗಳು, ಚಾನೆಲ್ ಅನ್ನಿಸೋದು ವಾಸ್ತವ.

ಸುತ್ತಲ ಜಗತ್ತಿನ ವಿದ್ಯಮಾನಗಳ ದಾಖಲಿಸುವ ಮತ್ತು ಅದನ್ನು ಇತರರಿಗೆ ತಲುಪಿಸುವ ಕೆಲಸ ಪತ್ರಿಕೆಗಳು ಅಥವಾ ಸುದ್ದಿ ಜಾಲಗಳು ಮಾಡುತ್ತವೆ. ಇದರ ಸತ್ಯಾಸತ್ಯತೆಗಳು ಆಯಾ ಪತ್ರಿಕೆಗಳು ಮತ್ತು ಸುದ್ದಿಪ್ರಸರಣ ಮಾಧ್ಯಮಗಳ ಕ್ರೆಡಿಬಿಲಿಟಿಯನ್ನು ಅವಲಂಭಿಸಿರುತ್ತದೆ. ವಿಶ್ವಾಸಾರ್ಹತೆ ಅನ್ನೋದು ನಿರಂತರ ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಅಥವಾ ಹೊಣೆಗಾರಿಕೆ ಆಗಿರುತ್ತದೆ. ಮೂಲತಃ ಒಂದು ಪತ್ರಿಕೆ ಅಥವಾ ಚಾನೆಲ್ ವಿಶ್ವಾಸಾರ್ಹತೆ ಹೊಂದಬೇಕಾದ್ದು ಅದರ ಹರವು ಹೆಚ್ಚಿಸಿಕೊಳ್ಳುವ ಅಥವಾ ವ್ಯಾಪ್ತಿ ಹೆಚ್ಚಿಸಿಕೊಳ್ಳುವ ಉದ್ದೇಶದ್ದಾಗಿರುತ್ತದೆ. ಅದಕ್ಕೂ ಮುಖ್ಯವಾಗಿ ವಾಣಿಜ್ಯ ಉದ್ದೇಶದ್ದೂ ಆಗಿರುತ್ತದೆ.

ಜಾಹೀರಾತು ಜಾಲ ತನ್ನ ಎಲ್ಲ ಸಾಧ್ಯತೆಗಳ ಬಗ್ಗೆ ಗಮನಹರಿಸುತ್ತಿರುತ್ತದೆ. ಅದೂ ಕೂಡ ಸಂವಹನದ ಅಥವಾ ತಲುಪುವ ಇಲ್ಲವೇ ತಲುಪಿಸುವ ಉಮೇದಿಯದ್ದಾಗಿರುತ್ತದೆ. ಇವೆರಡನ್ನು ಬೆಸೆಯುವ ಇಲ್ಲವೇ ಎರಡರ ನಡುವೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಸಾರ್ವಜನಿಕ ಸಂಪರ್ಕ (ಪಬ್ಲಿಕ್ ರಿಲೇಷನ್ಸ್) ಎನ್ನುವ ಮತ್ತೊಂದು ಮೀಡಿಯಾದ ಸ್ವರೂಪ ನಿರ್ವಹಿಸುತ್ತದೆ. ಈ ಎಲ್ಲದಕ್ಕೂ ಅದರದೇ ಆದ ಸಾಧ್ಯತೆಗಳು ಮತ್ತು ಮಿತಿಗಳಿವೆ. ಎಲ್ಲವೂ ತಮ್ಮ ಉದ್ದೇಶಗಳಿಗಾಗಿ ಅವುಗಳ ಈಡೇರಿಕೆಗಾಗಿ ಹಾತೊರೆಯುತ್ತಿರುತ್ತವೆ.

ಆದರೆ, ಹೇಗಾದರೂ ಮಾಡಿ ಗೆಲ್ಲಲೇಬೇಕು, ತಲುಪಲೇಬೇಕು, ತಲುಪಿಸಲೇಬೇಕು... ಎನ್ನುವ ಪೈಪೋಟಿ, ಜಿದ್ದುಗಳು ವ್ಯವಸ್ಥೆಯನ್ನು ಒಂದಷ್ಟು ಭ್ರಷ್ಟಗೊಳಿಸಿಬಿಡುತ್ತವೆ. ಇಲ್ಲಿಯೇ ಸ್ವಾರ್ಥದ ಸಾಧನೆಗೆ ದಾರಿ ತೆರಕೊಳ್ಳುತ್ತದೆ. ಹಾಗೆ ಒಳನುಸುಳಿ ಬರೋದೇ ಫೇವರಿಸಂ ಎನ್ನುವ ದೊಡ್ಡ ಭೂತ. ಈ ಫೇವರಿಸಂ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಸ್ವರೂಪದಲ್ಲಿರುತ್ತದೆ. ನಾವು ಭ್ರಷ್ಟತೆ ಅನ್ನೋದನ್ನು ಬರಿಯದೇ ಆರ್ಥಿಕ ದೃಷ್ಟಿಯಿಂದ ನೋಡುತ್ತಿದ್ದೇವೆ. ಅದಕ್ಕಿಂತ ಅಪಾಯಕಾರಿ ಮತ್ತು ಅನೈತಿಕವಾದದ್ದು ಮಾನಸಿಕ ಮತ್ತು ಸಾಮಾಜಿಕ ಭ್ರಷ್ಟತೆ. ಇವೆರಡೂ ಯಾವತ್ತೋ ಮೀಡಿಯಾ ಲೋಕವನ್ನು ಭ್ರಷ್ಟಗೊಳಿಸಿಟ್ಟಿದೆ. ನಿಜ ಹೇಳಬೇಕೆಂದರೆ ಇದೇ ಅತ್ಯಂತ ಅಪಾಯಕಾರಿ ಮತ್ತು ಜೀವ ವಿರೋಧಿ ಭ್ರಷ್ಟಾಚಾರ.

ಈಗ ಇಡೀ ಮೀಡಿಯಾ ಜಗತ್ತನ್ನು ಕಾಡುತ್ತಿರುವ ಮತ್ತು ಅವಕೃಪೆಗೊಳಗಾಗುತ್ತಿರುವ ಅಪಾಯವೆಂದರೆ ಪೇಡ್ ನ್ಯೂಸ್! ದುಡ್ಡು ಪಡೆದು ಯಾರದೋ, ಯಾವುದೋ ವಿಷಯದ ಪರವಹಿಸುವುದು ಈಗ ಕೆಲ ಪತ್ರಿಕೆಗಳ, ಚಾನೆಲ್ ಗಳ ಚಾಳಿ ಆಗಿಹೋಗಿದೆ. ಕೆಲವೇ ಪತ್ರಕರ್ತರು ಮತ್ತು ಸಾರ್ವಜನಿಕ ಸಂಪರ್ಕ ವಲಯ, ಕಾರ್ಪೋರೇಟ್ ವ್ಯವಸ್ಥೆಯನ್ನು ಖರೀದಿಸುವ ತಾಕತ್ತು ಇವತ್ತು ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಮತ್ತು ತಲೆಹಿಡುಕರಿಗೆ ಪ್ರಾಪ್ತವಾಗುತ್ತಿದೆ. ಮನಿ ಸೆಂಟರ್ಡ್ ಎಕಾನಮಿ ವ್ಯವಸ್ಥೆಯಲ್ಲಿ ಯಾವ ಆದರ್ಶಗಳಿರಲು ಸಾಧ್ಯ?

ಎಲ್ಲರೂ, ಎಲ್ಲ ರಂಗದವರೂ ದುಡ್ಡಿನ ಮೇಲೆ ದುಡ್ಡು ಗಳಿಸುತ್ತಿರುವಾಗ, ಐಷಾರಾಮಿ ಜಿಂದಗೀ ನಡೆಸುತ್ತಿರುವಾಗ ಮೀಡಿಯಾ ಜಗತ್ತೇಕೆ ಒಣಗುತ್ತಿರಬೇಕು? ಎನ್ನುವ ಮನಸ್ಥಿತಿಯವರಿಂದಲೇ ಇಂದು ಮೀಡಿಯಾ ಕರಪ್ಟ್ ಆಗುತ್ತಿದೆ. ಅಥವಾ ಇಂಥ ಆಮಿಷಗಳಿಂದ ಬೇರೆ ರಂಗ ತನ್ನ ಮ್ಯುಚುಯಲ್ ಬೆನಿಫಿಟ್ ಗೋಸ್ಕರ್ ಹೀಗೆ ಮೀಡಿಯಾ ತಲೆಹಿಡಿಯುವ ಕೆಲಸ ಮಾಡುತ್ತಿದೆ.

 ನೈತಿಕತೆ ಅನ್ನೋದು ಇಂದು ಬದುಕಿನ ಎಲ್ಲಾ ಮಜಲುಗಳಿಂದ ಕಾಣೆಯಾಗುತ್ತಿರುವುದರ ಸೂಚನೆ ಇದು. ನಮ್ಮ ವೈಯಕ್ತಿಕ ಬದುಕಿನಲ್ಲೇ ನಾವೆಷ್ಟರಮಟ್ಟಿಗೆ ನೈತಿಕತೆಗೆ ಪ್ರಾಮುಖ್ಯತೆ ಕೊಡುತ್ತಿದ್ದೇವೆ? ಜೀವನಮೌಲ್ಯಗಳಿಗೆ ನಮ್ಮ ಕಾಳಜಿ ಎಷ್ಟಿದೆ? ಯಾರು ಇದನ್ನೆಲ್ಲ ಪಕ್ಕಾ ಪಾಲಿಸಿಕೊಂಡು ಬರುತ್ತಿದ್ದಾರೆ?... ಆತ್ಮವಿಮರ್ಶೆ ಮಾಡಿಕೊಂಡರೆ ನಿಜದ ಬಣ್ಣ ಮುಂದೆ ಬರುತ್ತದೆ. ಆ ಧೈರ್ಯ ಯಾರಿಗಿದೆ?

ಫೇವರಿಸಂ ಅನ್ನೋದು ಬರಿಯ ದುಡ್ಡಿನ ಆಮಿಷಕ್ಕಷ್ಟೇ ಸಾಧ್ಯವಾಗುವಂಥದ್ದಲ್ಲ. ಜಾತಿ, ಧರ್ಮ, ಪ್ರದೇಶ, ಅಂತಸ್ತಿನ ಪ್ರಲೋಭನೆಗಳೂ ಮೀಡಿಯಾ ಲೋಕದ ಭ್ರಷ್ಟತೆಗೆ ದೊಡ್ಡ ಕಾಣಿಕೆ ನೀಡಿವೆ. ಮೀಡಿಯಾದ ಅಂತಃಲೋಕವೂ ಜಾತಿ, ಧರ್ಮ, ಪ್ರಾದೇಶಿಕ ಭಿನ್ನಾಭಿಪ್ರಾಯಗಳಿಂದ ಸಾಕಷ್ಟು ಭ್ರಷ್ಟಗೊಂಡಿದೆ. ಪ್ರತಿಭೆ, ಸ್ಪಷ್ಟ ಮತ್ತು ನೈಜ ಕಾಳಜಿಗಳು ಜಾತಿ, ಧರ್ಮ, ಪ್ರಾದೇಶಿಕತೆಯ ಸಂಕುಚಿತ ಮನೋಭಾವನೆಗಳ ಮುಂದೆ  ಗೌನವಾಗುತ್ತಿರುವುದೂ ಮತ್ತು ಗೌನವಾಗಿಸುತ್ತಿರುವುದು ಕೂಡ ದೊಡ್ಡ ಭ್ರಷ್ಟತೆ ಅಲ್ಲವೇನು?

ಮಾನಸಿಕ ಮತ್ತು ಸಾಮಾಜಿಕ ಭ್ರಷ್ಟತೆ ಆರ್ಥಿಕ ಭ್ರಷ್ಟತೆಗಿಂತ ಅಪಾಯಕಾರಿ.